ಶಿರಸಿ: ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕರಡಿ ದಾಳಿಗೆ ತುತ್ತಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ.
ಸುಂಡಳ್ಳಿ ಗ್ರಾಮದ ಓಂಕಾರ ಪದ್ಮನಾಭ ಜೈನ್ (52) ಮೃತ ರೈತ. ಮನೆಯ ಸಮೀಪದ ಕಾಡಿನಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ.
‘ಚೀರಾಟ ಕೇಳಿ ಕಾಡಿನತ್ತ ಓಡಿದ್ದೆವು. ಕರಡಿಯಿಂದ ಪಾರಾಗಲು ಅವರು ಸಾಕಷ್ಟು ದೂರ ಓಡಿ ಬಂದಿರುವ ಸಾಧ್ಯತೆ ಇದೆ. ರಕ್ಷಣೆಗೆ ಮರ ಏರುವಾಗ ದಾಳಿ ಮಾಡಿದೆ. ಮರದ ಬುಡದಲ್ಲೇ ದೇಹಕ್ಕೆ ಗಂಭೀರ ಗಾಯಗೊಂಡಿದ್ದ ಓಂಕಾರ ಮೃತ ದೇಹ ಇತ್ತು. ಅವರ ದೇಹದ ಮೇಲಾದ ಗಾಯ ಗಮನಿಸಿದಾಗ ಇದು ಕರಡಿ ದಾಳಿ ಎಂಬುದು ಸ್ಪಷ್ಟವಾಯಿತು’ ಎಂದು ಸ್ಥಳೀಯರು ತಿಳಿಸಿದ್ದಾರೆ.
'ಮತ್ತಿಘಟ್ಟ ಭಾಗದ ಅರಣ್ಯದಲ್ಲಿ ಕರಡಿಗಳಿದ್ದು ಅದು ಸರಗುಪ್ಪ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ. ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಕಾಡಿನ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ’ ಎಂದು ಜಾನ್ಮನೆ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್ ಪ್ರತಿಕ್ರಿಯಿಸಿದರು.
ಮೃತ ಓಂಕಾರ ಈ ಹಿಂದೆ ದೇವನಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.