
ಶಿರಸಿ: ‘ಬೇಡ್ತಿ–ವರದಾ ನದಿ ಜೋಡಣೆ ಸಂಬಂಧ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ತೋರುತ್ತಿರುವ ಉತ್ಸುಕತೆ ನಿಲ್ಲಿಸಿ,ಯೋಜನೆ ಕೈಬಿಡಲು ಸಿ.ಎಂ., ಡಿಸಿಎಂ ಮುಂದಾಗಬೇಕು’ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಒತ್ತಾಯಿಸಿದರು.
‘ರಾಜ್ಯ ಸರ್ಕಾರ ಯೋಜನೆ ಬೇಡ ಎಂದರೆ ಈಗಲೂ ಕೇಂದ್ರ ಸರ್ಕಾರ ಯೋಜನೆ ಹೇರುವುದಿಲ್ಲ. 30 ವರ್ಷದಿಂದ ಚರ್ಚೆ ಆಗದ್ದು, ಈ ಎರಡೂವರೆ ವರ್ಷದಲ್ಲಿ ಏಕೆ ಮುನ್ನೆಲೆಗೆ ಬಂದಿದೆ’ ಎಂದು ಪ್ರಶ್ನಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಒಪ್ಪಿದರೆ ಮಾತ್ರ ಯೋಜನೆ ಮುಂದುವರೆಯುತ್ತದೆ. ಇದು ಗೊತ್ತಿದ್ದೂ ಡಿಪಿಆರ್ಗೆ ಅನುಮತಿ ನೀಡಿದ್ದು ಸರಿಯಾದ ಕ್ರಮವಲ್ಲ’ ಎಂದೂ ಆಕ್ಷೇಪಿಸಿದರು.
‘ವೈಜ್ಞಾನಿಕ ಕಾರಣ ಹಾಗೂ ಅನುಭವದ ಆಧಾರದಲ್ಲಿ ನದಿ ಜೋಡಣೆ ಯೋಜನೆ ನಮಗೆ ಬೇಡ. ಬೃಹತ್ ಯೋಜನೆಯಿಂದ ಭೂ ಕುಸಿತ ಉಂಟಾಗುತ್ತಿದೆ. ಜಿಲ್ಲೆಯ ಜನರು ಒಟ್ಟಾಗಿ ಈ ಯೋಜನೆ ಬೇಡ ಎಂದು ವಿರೋಧಿಸುತ್ತಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.
‘ಜಿಲ್ಲೆಗೆ ಭೇಟಿ ನೀಡಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ಯೋಜನೆ ಮಾಡುತ್ತೇವೆ ಎಂದು ಹೇಳಿದಾಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ? ಎಂದು ಕಿಡಿಕಾರಿದರು.