
ಭಟ್ಕಳ: ಧರ್ಮಸ್ಥಳದ ಮದ್ಯವರ್ಜನಾ ಶಿಬಿರದಲ್ಲಿ ದೇವರ ಮೇಲೆ ಆಣೆ ಮಾಡಿಸಿ, ಮಾನಸಿಕ ಪರಿವರ್ತನೆಯಿಂದ ಮದ್ಯ ಬಿಡಿಸಲು ಪ್ರೇರೇಪಿಸಲಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಮುರ್ಡೇಶ್ವರದ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ನಡೆಸಿದ 2016ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡದವನು ಚಟಕ್ಕೆ ದಾಸನಾಗುತ್ತಾನೆ. ನಾವು ಸಂಘಟಿಸುವ 8 ದಿನಗಳ ಮದ್ಯವರ್ಜನ ಶಿಬಿರದಲ್ಲಿ ಅವರಲ್ಲಿರುವ ಧರ್ಮ ಪ್ರಜ್ಞೆಯನ್ನು ಎಚ್ಚರಿಸಿ ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡುತ್ತೇವೆ. ಶಿಬಿರದಿಂದ ಹೋರ ಹೋಗುವವರು ಪುನಃ ವ್ಯಸನಕ್ಕೆ ಅಂಟಿಕೊಳ್ಳದೇ ಒಳ್ಳೆ ಜೀವನ ನಡೆಸಿಕೊಂಡು ಹೋಗಬೇಕು’ ಎಂದು ಕರೆ ನೀಡಿದರು.
ಭಟ್ಕಳ ಹಾಗೂ ಹೊನ್ನಾವರ ಆಳಿದ ರಾಣಿ ಚೆನ್ನಾಭೈರಾದೇವಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಸಚಿವ ಮಂಕಾಳ ವೈದ್ಯ ಜಾಗ ಗುರುತಿಸಿ ನೀಡಿದರೆ ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ‘ಸರ್ಕಾರದಿಂದ ಆಗದಿರುವ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಮಾಡುತ್ತಿದೆ. ಗ್ರಾಮೀಣ ಭಾಗದ ಜನರನ್ನು ಮೀಟರ್ ಬಡ್ಡಿ ವ್ಯವಹಾರದಿಂದ ಮುಕ್ತರನ್ನಾಗಿ ಮಾಡಿದ ಕೀರ್ತಿ ಧರ್ಮಸ್ಥಳ ಟ್ರಸ್ಟ್ಗೆ ಸಲ್ಲುತ್ತದೆ. ಪೂಜ್ಯರ ಎಲ್ಲ ಸಮಾಜಮುಖಿ ಕಾರ್ಯಗಳಿಗೂ ನನ್ನ ಬೆಂಬಲ ಸದಾ ಇರುತ್ತದೆ’ ಎಂದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಗೌರವ ಅಧ್ಯಕ್ಷ ಚಂದ್ರಶೇಖರ್ ಗೌಡ, ಅಧ್ಯಕ್ಷ ಸತೀಶ ಶೇಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ನಟರಾಜ, ಗಾಮಾಭಿವೃದ್ಧಿ ಟ್ರಸ್ಟ್ ನಿರ್ದೇಶಕರಾದ ವಿವೇಕ ಪಾಯಸ, ಆನಂದ ಸುವರ್ಣ ಮಾತನಾಡಿದರು.
ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮುರ್ಡೇಶ್ವರ ಪಿಎಸ್ಐ ನವೀನ ಕುಮಾರ, ಹಿರಿಯ ಪರ್ತಕರ್ತ ರಾಧಕೃಷ್ಣ ಭಟ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಾಜು ನಾಯ್ಕ, ಎಸ್.ಎಸ್. ಕಾಮತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.