ಭಟ್ಕಳ: ತಾಲ್ಲೂಕಿನಲ್ಲಿ ಸೋಮವಾರ ಸುರಿದ ಭಾರಿ ಮಳೆ ನಾಡದೋಣಿ ಮೀನುಗಾರರ ಬದುಕನ್ನೆ ಕಸಿದು ಕೊಂಡಿದೆ. ಆದಾಯಕ್ಕೆ ಆಧಾರದವಾಗಿದ್ದ ದೋಣಿಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು ಬಡ ಮೀನುಗಾರರು ದಿಕ್ಕುತೋಚದಂತಾಗಿದ್ದಾರೆ.
ಸಮುದ್ರದಲ್ಲಿ ಕಡಲಿನಲ್ಲಿ ಜೀವದ ಹಂಗು ತೊರೆದು ಮೀನಿನ ಬೇಟೆಯಾಡಿ ಜೀವನ ನಡೆಸುವ ಮೀನುಗಾರರ ಬದುಕೆ ಸಾಹಸಮಯ. ಅದರಲ್ಲೂ ಪಾತಿ ದೋಣಿ ಹಾಗೂ ಗಿಲ್ನೆಟ್ ದೋಣಿ ಮೀನುಗಾರರು ಮಳೆಗಾಲದಲ್ಲಿ ಯಾಂತ್ರೀಕೃತ ದೋಣಿ ಮೀನುಗಾರಿಕೆ ಚಟುವಟಿಕೆ ನಿಷೇಧ ಇರುವ ಸಮಯದಲ್ಲಿ ಒಂದಿಷ್ಟು ಮೀನುಗಾರಿಕೆ ಮಾಡಿ ಆದಾಯ ಮಾಡಿ
ಕೊಳ್ಳುತ್ತಾರೆ. ಈ ಬಾರಿ ಮಳೆಗಾಲ ಪ್ರಾರಂಭದ ದಿನಗಳಲ್ಲಿ ಇವರು ಉತ್ತಮ ಮೀನುಗಾರಿಕೆ ನಡೆಸಿದರು. ಸಿಗಡಿ, ಮೀನುಗಳು ಹೇರಳವಾಗಿ ದೊರೆತು ಕೈ ತುಂಬಾ ಆದಾಯವಾಗಿತ್ತು. ಆದರೆ ಸೋಮವಾರ ಸಂಭವಿಸಿದ ಮೇಘಸ್ಪೋಟ ಎಲ್ಲವನ್ನು ಕಸಿದುಕೊಂಡಿದೆ.
ಮೀನುಗಾರಿಕೆಗೆ ತೆರಳಲು ಕಡಲತೀರದಲ್ಲಿ ಲಂಗರು ಹಾಕಿದ್ದ ದೋಣಿಗಳು ಮಳೆಯ ನೀರಿನ ರಭಸಕ್ಕೆ ಸಮುದ್ರದ ಪಾಲಾಗಿವೆ. ಅನೇಕ ದೋಣಿಗಳನ್ನು ಮೀನುಗಾರರು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಮುಂಡಳ್ಳಿ, ಬಂದರ, ತೆಂಗಿನಗುಂಡಿ ಹಾಗೂ ಅಳ್ವೆಕೋಡಿ ಭಾಗದಲ್ಲಿ ನೆರೆಗೆ 130 ಮೀನುಗಾರರ
ದೋಣಿಗಳಿಗೆ ಸಂಪೂರ್ಣ ಹಾನಿಯಾಗಿದೆ. 75 ದೋಣಿಗಳಿಗೆ ಭಾಗಶಃ ಹಾನಿಯಾಗಿದೆ. 208 ದೋಣಿಗಳ ಬಲೆ ಸಮುದ್ರ ಪಾಲಾಗಿದೆ. ಮೀನುಗಾರರ ಮಾಹಿತಿ ಪ್ರಕಾರ ಒಂದು ಗಿಲ್ನೆಟ್ ದೋಣಿಗೆ ₹8 ಲಕ್ಷ ಮೌಲ್ಯ ಇದ್ದರೆ, ಪಾತಿ ದೋಣಿಗೆ 2 ಲಕ್ಷ ಮೌಲ್ಯ ಇದೆ. ಜೀವನಕ್ಕೆ ಆಧಾರವಾದ ಈ ದೋಣಿಗಳ ಹಾನಿಯಿಂದ ಮುಂದಿನ ದಾರಿ ಕಾಣದೆ ಮೀನುಗಾರರು ಕಂಗೆಟ್ಟು ಹೋಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.