ADVERTISEMENT

ಭಟ್ಕಳ: ಕೆಂಬಣ್ಣಕ್ಕೆ ತಿರುಗಿದ ಪುರಸಭೆ ನೀರು

ಬಾವಿ ನೀರು ಬಳಸಲಾಗದೆ ನಳದ ಸಂಪರ್ಕ ಪಡೆದ ಸಾರ್ವಜನಿಕರು

ಮೋಹನ ನಾಯ್ಕ
Published 12 ಜುಲೈ 2025, 4:28 IST
Last Updated 12 ಜುಲೈ 2025, 4:28 IST
ಭಟ್ಕಳ ಪಟ್ಟಣದ ಮಣ್ಕುಳಿಯಲ್ಲಿ ಪುರಸಭೆ ಸರಬರಾಜು ಮಾಡಿದ ಕೆಂಪು ಮಿಶ್ರಿತ ಕೊಳವೆ ನೀರು
ಭಟ್ಕಳ ಪಟ್ಟಣದ ಮಣ್ಕುಳಿಯಲ್ಲಿ ಪುರಸಭೆ ಸರಬರಾಜು ಮಾಡಿದ ಕೆಂಪು ಮಿಶ್ರಿತ ಕೊಳವೆ ನೀರು   

ಭಟ್ಕಳ: ‘ಪುರಸಭೆ ಪೂರೈಸುವ ನಳದ ನೀರಿನಲ್ಲಿ ಮಣ್ಣು ಮಿಶ್ರಣವಾಗಿ ಕೆಂಪಗಾಗಿದೆ. ಈ ನೀರು ಸ್ನಾನಕ್ಕೂ ಯೋಗ್ಯವಿಲ್ಲ’ ಎಂದು ಪಟ್ಟಣದ ಮಣ್ಕುಳಿ ನಿವಾಸಿ ದಾಸ ದೇವೇಂದ್ರ ನಾಯ್ಕ ಅಳಲು ತೋಡಿಕೊಂಡರು.

‘ಒಳಚರಂಡಿಯ ಕೊಳಚೆ ನೀರು ಬಾವಿಗೆ ಸೇರುತ್ತಿದೆ ಎಂದು ನಳದ ಸಂಪರ್ಕ ಪಡೆದರೆ ಈಗ ಅದರ ಪರಿಸ್ಥಿತಿಯೂ ಹಾಗೇ ಆಗಿದೆ. ನಾವು ಶುದ್ಧ ನೀರಿಗಾಗಿ ಎಲ್ಲಿ ಅಲೆದಾಡಬೇಕು’ ಎಂದು ಅವರು ಪ್ರಶ್ನಿಸಿದರು.

‘ಭಟ್ಕಳ ಪುರಸಭೆ ವ್ಯಾಪ್ತಿಯ ವಾಸಿಗಳಿಗೆ ಇದು ನಿತ್ಯದ ಗೋಳಾಗಿದೆ. 15 ದಿನಗಳ ಹಿಂದೆ ನೀರು ಸಂಗ್ರಹಿಸಿ ಪುರಸಭೆ ಅಧಿಕಾರಿಗಳಿಗೆ ತೋರಿಸಿ, ಮಾಹಿತಿ ನೀಡಲಾಗಿದೆ. ಆದರೂ ಕ್ರಮವಹಿಸಿಲ್ಲ’ ಎನ್ನುವುದು ಪುರಸಭೆಯ ಮಾಜಿ ಸದಸ್ಯ ವೇಂಕಟೇಶ ನಾಯ್ಕ ಆಸರಕೇರಿ ಅವರ ಆರೋಪ.

ADVERTISEMENT

ಕಡವಿನಕಟ್ಟಾದ ಭೀಮಾ ನದಿಯ ನೀರನ್ನು ಪಟ್ಟಣಕ್ಕೆ ಪೂರೈಸಲಾಗುತ್ತದೆ. ನದಿಯಿಂದ ನೀರು ಎತ್ತಿ ಪಟ್ಟಣದ ಸಂತೆ ಮಾರ್ಕೆಟ್‌ ಬಳಿ ಇರುವ ಜಲಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಿ, ಬಳಿಕ ನಳದ ಮೂಲಕ ಮನೆಮನೆಗಳಿಗೆ ನೀರು ಪೂರೈಸಲಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ನೀರು ಶುದ್ಧೀಕರಿಸಿ ಬಿಡುತ್ತಾರೋ ಅಥವಾ ನದಿ ನೀರು ನೇರವಾಗಿ ಪೂರೈಸುತ್ತಾರೋ ಎಂಬ ಅನುಮಾನ ಶುರುವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಪಟ್ಟಣದ ವಿವಿಧ ಪ್ರದೇಶಗಳ ಮನೆಗೆ ನಿತ್ಯ ಪೂರೈಸಲಾಗುತ್ತಿರುವ ನೀರಿನ ಶುದ್ಧತೆ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಉದ್ಭವಿಸಿದೆ. ಕೆಸರಿನಿಂದ ಕೂಡಿದ ನೀರಿನ ಬಳಕೆಗೆ ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ.

‘ಪಟ್ಟಣದ ಒಳಚರಂಡಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚೇಂಬರ್ ನೀರು ಸೋರಿಕೆಯಾಗಿ, ಪಟ್ಟಣದ ಬಹುತೇಕ ಬಾವಿಗಳ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ಬಾವಿ ನೀರು ಕಲುಷಿತಗೊಂಡ ವಾರ್ಡಿನ ಜನರು ಪುರಸಭೆ ನಳದ ಸಂಪರ್ಕ ಪಡೆದು ಆ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಈಗ ಪುರಸಭೆ ಪೂರೈಸುವ ನೀರೂ ಅಶುದ್ಧವಾಗಿರುವುದು ಸಂಕಷ್ಟಕ್ಕೆ ಕಾರಣವಾಗಿದೆ’ ಎಂಬುದು ಜನರ ದೂರು.

15 ದಿನಗಳಿಂದ ಜಲಶುದ್ಧೀಕರಣ ಘಟಕ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಸಮಸ್ಯೆ ಆಗಿರಬಹುದು. ಮುಂದೆ ಇಂತಹ ಸಮಸ್ಯೆ ತಲೆದೋರದು
ವೆಂಕಟೇಶ ನಾವಡ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.