ಭಟ್ಕಳ: ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣು ಗಣಪತಿ ದೇವಸ್ಥಾನದಿಂದ ಕಿತ್ರೆಯ ಶ್ರೀಕ್ಷೇತ್ರ ದೇವಿಮನೆಯ ಶಿವಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಶಿವರಾತ್ರಿ ಅಂಗವಾಗಿ ಬುಧವಾರ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಮತ್ತು ದೇವಸ್ಥಾನದಲ್ಲಿ ಪಂಚಾಕ್ಷರಿ ಜಪ ಮಾಡಲಾಯಿತು. ದೇವಿಮನೆ ಪ್ರಧಾನ ಅರ್ಚಕ ಬಾಲಚಂದ್ರ ಭಟ್ಟ, ‘ಶಿವರಾತ್ರಿಯಂದು ಭಕ್ತರು ಪಾದಯಾತ್ರೆ ಮಾಡಿ ಪಂಚಾಕ್ಷರಿ ಜಪ ಜಪಿಸಿದರೆ ಒಳ್ಳೆಯದಾಗುತ್ತದೆ. ಶಿವನ ಸ್ಮರಣೆಯಿಂದ ಪಾಪ, ಕೊಳೆ, ಕಲ್ಮಶ ಹೋಗಿ ಮನಸ್ಸು ಶುದ್ಧಿಕರಣ ಆಗಲು ಸಹಕಾರಿ ಆಗುತ್ತದೆ’ ಎಂದರು.
ಧನ್ವಂತರಿ ವಿಷ್ಣುಮೂರ್ತಿ ಗಣಪತಿ ದೇವಸ್ಥಾನದಲ್ಲಿ ಅರ್ಚಕ ಶಂಕರ ಭಟ್ಟ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಾದಯಾತ್ರೆ ಸಮಿತಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿದರು.
ಮಾರುಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ.ನಾಯ್ಕ, ಸದಸ್ಯ ನಾರಾಯಣ ಗೊಂಡ, ಪ್ರಮುಖರಾದ ಕೃಷ್ಣಮೂರ್ತಿ ಹೆಗಡೆ, ಮಾರುಕೇರಿ ಎಸ್ಪಿ ಹೈಸ್ಕೂಲ್ ಮುಖ್ಯಶಿಕ್ಷಕ ಪಿ.ಟಿ.ಚಹ್ವಾಣ ಸೇರಿದಂತೆ ಅನೇಕರು ಇದ್ದರು.
ದೇವಸ್ಥಾನದ ಆಡಳಿತ ಮಂಡಳಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.