ಭಟ್ಕಳ(ಉತ್ತರ ಕನ್ನಡ): ‘ಇಲ್ಲಿನ ತೆಂಗಿನಗುಂಡಿ ಬಂದರಿನಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ನಾಮಫಲಕವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದು ಖಂಡನೀಯ’ ಎಂದು ಹೆಬಳೆ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರು ಪಂಚಾಯಿತಿ ಎದುರು ಮಂಗಳವಾರ ಧರಣಿ ನಡೆಸಿದರು.
‘ವೀರ ಸಾವರ್ಕರ್ ನಾಮಫಲಕ ತೆಗೆಯುವುದಾದರೆ, ಪಂಚಾಯಿತಿ ವ್ಯಾಪ್ತಿಯ ಎಲ್ಲ ಅನಧಿಕೃತ ನಾಮಫಲಕ ಹಾಗೂ ಕಟ್ಟಡವನ್ನು ತೆರವುಗೊಳಿಸಿ’ ಎಂದು ಅವರು ಆಗ್ರಹಿಸಿದರು.
‘ತೆಂಗಿನಗುಂಡಿ ಬಂದರಿಗೆ ವೀರ ಸಾವರ್ಕರ್ ಹೆಸರಿಡಲು 2022ರಲ್ಲಿ ಸಾರ್ವಜನಿಕರು ನೀಡಿದ ಮನವಿಯನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 30 ಸದಸ್ಯರು ಅನುಮೋದಿಸಿದ್ದಾರೆ. ಆದರೆ ಇದಕ್ಕೆ ಅಂದಿನ ಪಿಡಿಒ ಹಿಂಬರಹ ನೀಡದ ಕಾರಣ ನಾಮಫಲಕ ಹಾಕಲು ಅನುಮತಿ ಪಡೆದಿರಲಿಲ್ಲ. ಈಗ ಸಾವರ್ಕರ್ ನಾಮಫಲಕ ತೆರವಿಗೆ ಯಾವ ಲಿಖಿತ ದೂರು ಬಾರದಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತಾರದೇ ಏಕಾಏಕಿ ತೆರವು ಮಾಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಾಯ ದೇವಾಡಿಗ ದೂರಿದರು.
‘ತೆಂಗಿನಗುಂಡಿ ರಸ್ತೆಯಲ್ಲಿ ಹಾಕಲಾದ ‘ಜಾಮಿಯಾಬಾದ್ ರಸ್ತೆ’ ಎಂಬ ಅನಧಿಕೃತ ನಾಮಫಲಕವನ್ನು ಮೊದಲು ತೆರವು ಮಾಡಬೇಕು. ಇದಕ್ಕೆ ಪಿಡಿಒ ಒಪ್ಪದಿದ್ದಲ್ಲಿ, ಧರಣಿ ಕೈಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪಿಡಿಒ ಒಪ್ಪದಿದ್ದಾಗ, ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜೊತೆಗೂಡಿ ಬಂದರಿಗೆ ತೆರಳಿ ಸಾರ್ವಕರ್ ನಾಮಫಲಕ ಮರುಅಳವಡಿಸಲು ಮುಂದಾದರು. ಆಗ ಪೊಲೀಸರು ತಡೆಯಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಆದರೂ ಕಟ್ಟೆಯನ್ನು ಕಟ್ಟಲಾಯಿತು.
‘ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಲಿಖಿತವಾಗಿ ನೀಡಿರುವ ಆರು ಅನಧಿಕೃತ ನಾಮಫಲಕವವನ್ನು ಒಂದು ವಾರದಲ್ಲಿ ತೆರವು ಮಾಡಿದರೆ, ನಾವೇ ಕಟ್ಟೆ ಒಡೆಯುತ್ತೇವೆ. ನಾಮಫಲಕಗಳನ್ನು ತೆರವು ಮಾಡದಿದ್ದಲ್ಲಿ, ಇದೇ ಕಟ್ಟೆಯಲ್ಲಿ ವೀರ ಸಾವರ್ಕರ್ ನಾಮಫಲಕ ಮರು ಅಳವಡಿಸುತ್ತೇವೆ’ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ಸಂಚಾಲಕರಾದ ಗೋವಿಂದ ನಾಯ್ಕ ಮತ್ತು ಶ್ರೀಕಾಂತ ನಾಯ್ಕ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ತೆಂಗಿನಗುಂಡಿ ಬಂದರು ಸುತ್ತಮುತ್ತ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.