ಹೊನ್ನಾವರ: ಆಳ ಸಮುದ್ರದ ಮೀನುಗಾರಿಗೆ ತೆರಳಿದ್ದ ದೋಣಿಯೊಂದು ಮಂಗಳವಾರ, ಇಲ್ಲಿನ ಕಡಲ ತೀರದಿಂದ ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ ಅವಘಡಕ್ಕೀಡಾhohಗಿದೆ. ಲಕ್ಷಾಂತರ ರೂಪಾಯಿ ಮೊತ್ತದ ಹಾನಿಯಾಗಿದೆ.
ದೋಣಿಯಲ್ಲಿದ್ದ ಆರು ಜನರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಇಕ್ಬಾಲ್ ನೇತೃತ್ವದಲ್ಲಿ ಸ್ಥಳೀಯರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಅಪಘಾತಕ್ಕೀಡಾದ ‘ವಾಟರ್ ಕ್ವೀನ್’ ಹೆಸರಿನ ದೋಣಿಯು ಮಂಕಿಯ ಪ್ರಕಾಶ ಪಾಸ್ಕೋಲ್ ಪಿಂಟೊ ಎಂಬುವವರಿಗೆ ಸೇರಿದೆ.
‘ದೋಣಿಯ ತಳಭಾಗ ಬಿರುಕು ಬಿಟ್ಟು ನೀರು ತುಂಬಿ ಮುಳುಗುವ ಸ್ಥಿತಿಯಲ್ಲಿತ್ತು. ಅದನ್ನು ದಡಕ್ಕೆ ತರುವ ವೇಳೆ ಅಳಿವೆಯ ಮರಳು ದಿಣ್ಣೆಗೆ ಬಡಿದು ದೋಣಿ ಛಿದ್ರವಾಯಿತು. ಬಂದರು ನಿರ್ಮಾಣ ಮಾಡುತ್ತಿರುವ ಪೋರ್ಟ್ ಕಂಪನಿ ಅಳಿವೆಯ ಹೂಳು ತೆಗೆಯಲು ಅವೈಜ್ಞಾನಿಕ ವಿಧಾನ ಅನುಸರಿಸಿದೆ. ಇದರಿಂದ ಅಳಿವೆಯಲ್ಲಿ ಪುನಃ ಹೂಳು ತುಂಬುತ್ತಿದ್ದು, ದೋಣಿ ದುರಂತ ಸಂಭವಿಸಲು ಕಾರಣವಾಗಿದೆ. ಇದರಿಂದ ಸುಮಾರು ₹ 95 ಲಕ್ಷ ನಷ್ಟವಾಗಿದೆ’ ಎಂದು ದೋಣಿ ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್ ತಿಳಿಸಿದರು.
ಅವಘಡಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.