ಹೊನ್ನಾವರ: ತಾಲ್ಲೂಕಿನ ವ್ಯಾಪ್ತಿಯ ಕೆಳಗಿನಪಾಳ್ಯ, ಕಾಸರಕೋಡ ಹಾಗೂ ಬಿಕಾಸಿತಾರಿಯ ಸಮೀಪ ಶರಾವತಿ ನದಿಯಲ್ಲಿ ಬುಧವಾರ ದೋಣಿವಿಹಾರವನ್ನು ತಾಲ್ಲೂಕು ಆಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದಿದ್ದ ನೂರಾರು ಪ್ರವಾಸಿಗರು ದೋಣಿ ವಿಹಾರ ನಡೆಸಲಾಗದೆ ನಿರಾಸೆ ಅನುಭವಿಸಿದರು.
ಕೆಲ ದಿನಗಳ ಹಿಂದೆ ಕಾಸರಕೋಡ ಕಾಂಡ್ಲಾ ವನಕ್ಕೆ ಪ್ರವಾಸಿಗರನ್ನು ಕರೆ ತಂದಿದ್ದ ಕಾರು ಚಾಲಕನೊಬ್ಬನ ಮೇಲೆ ದೋಣಿ ವಿಹಾರ ಉದ್ಯಮಕ್ಕೆ ಸಂಬಂಧಿಸಿದ ಮದ್ಯವರ್ತಿಗಳು ಹಲ್ಲೆ ನಡೆಸಿದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ನಡೆದ ತನಿಖೆಯ ವೇಳೆ ಕೆಲವು ದೋಣಿ ಮಾಲಿಕರು ದೋಣಿ ವಿಹಾರಕ್ಕೆ ಪಡೆದಿದ್ದ ಅನುಮತಿಯನ್ನು ನವೀಕರಿಸದಿರುವುದು ಬೆಳಕಿಗೆ ಬಂದಿತ್ತು. ಇದೇ ಘಟನೆಯನ್ನು ಆಧರಿಸಿ ತಾಲ್ಲೂಕು ಆಡಳಿತ ಬುಧವಾರ ದೋಣಿ ವಿಹಾರಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು.
‘ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಸಭೆ ಕರೆದಿದ್ದು ಸಚಿವರ ನಿರ್ಧಾರ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಸಿದ್ಧರಾಮೇಶ್ವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.