ADVERTISEMENT

ಸದ್ದು ಮಾಡದ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ

ಸಮಸ್ಯೆಯ ಕೂಪದಲ್ಲಿ ಸಂಸ್ಥೆ: ವೇತನವಿಲ್ಲದೇ ಬೀದಿಗೆ ಬಂದ ಗುತ್ತಿಗೆ ನೌಕರರ ಕುಟುಂಬ

ಎಂ.ಜಿ.ಹೆಗಡೆ
Published 15 ಜೂನ್ 2019, 16:03 IST
Last Updated 15 ಜೂನ್ 2019, 16:03 IST

ಹೊನ್ನಾವರ: ಏಳು ತಿಂಗಳಿನಿಂದ ವೇತನವಿಲ್ಲದೆ ಬಿಎಸ್ಎನ್ಎಲ್‌ ಗುತ್ತಿಗೆ ಕಾರ್ಮಿಕರಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ. ಇದರಿಂದ ದೂರವಾಣಿ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.ಗ್ರಾಹಕರು ಬಿಎಸ್ಎನ್ಎಲ್‌ನಿಂದವಿಮುಖರಾಗಿ ಖಾಸಗಿ ಕಂಪನಿಗಳತ್ತ ಮುಖಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿನಾಲ್ಕುಎಸ್‌ಡಿಇ ಕೇಂದ್ರಗಳ 25 ದೂರವಾಣಿ ವಿನಿಮಯ ಕೇಂದ್ರಗಳ ಪೈಕಿ ಹಲವು ಬಾಗಿಲು ಮುಚ್ಚಿದ ಸ್ಥಿತಿಯಲ್ಲಿವೆ. ನಿರ್ವಹಣೆಗೆ ಅಗತ್ಯವಾದ ನೌಕರರ ಕೊರತೆಯಿದೆ. ಸ್ಥಿರ ದೂರವಾಣಿ ಕೇಬಲ್‌ಗಳು ಹಾಗೂ ಮೊಬೈಲ್ ಟವರ್‌ಗಳುಹೀನಾಯ ಸ್ಥಿತಿ ತಲುಪಿದ್ದು, ಗ್ರಾಹಕರು ಬಿಎಸ್ಎನ್ಎಲ್ ಅನ್ನು ಶಪಿಸುತ್ತಿದ್ದಾರೆ.

‘ಬಿಎಸ್ಎನ್ಎಲ್ ಕಚೇರಿಯಲ್ಲಿ ಅಧಿಕಾರಿಗಳಿಗೆಕೊರತೆ ಇಲ್ಲ. ಆದರೆ, ದೂರವಾಣಿ ಕೆಟ್ಟು ಹೋದರೆ ಸರಿ ಮಾಡಲು ಮಾತ್ರ ಯಾರೂ ಬರುತ್ತಿಲ್ಲ. ಆನ್‌ಲೈನ್‌ನಲ್ಲಿ ದೂರು ದಾಖಲಿಸಿದರೆ ಒಂದೆರಡು ದಿನಗಳ ನಂತರ ದೂರವಾಣಿ ಸರಿಪಡಿಸಲಾಗಿದೆ ಎಂಬ ಸಂದೇಶ ಬರುತ್ತದೆ. ಆದರೆ, ದುರಸ್ತಿ ಮಾತ್ರ ಆಗುವುದೇ ಇಲ್ಲ.ನನ್ನ ಸ್ಥಿರ ದೂರವಾಣಿ ಸ್ಥಗಿತಗೊಂಡು ಒಂದು ವರ್ಷ ಕಳೆದಿದೆ’ ಎಂದು ಗುಂಡಬಾಳಾ ವಿನಿಮಯ ಕೇಂದ್ರ ವ್ಯಾಪ್ತಿಯ ಬಿಎಸ್ಎನ್ಎಲ್ ಗ್ರಾಹಕ ಎಂ.ಎಸ್.ಗಾಳಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

440 ಇದ್ದ ಗುಂಡಬಾಳಾ ವಿನಿಮಯ ಕೇಂದ್ರದ ದೂರವಾಣಿ ಸಂಪರ್ಕಗಳ ಸಂಖ್ಯೆ ಇದೀಗ 60ಕ್ಕೆ ಇಳಿದಿದೆ. ಕವಲಕ್ಕಿ ಎಸ್‌ಡಿಇ ವ್ಯಾಪ್ತಿಯ ಮೊದಲಿನ 3,300 ದೂರವಾಣಿ ಸಂಪರ್ಕಗಳ ಸಂಖ್ಯೆ ಈಗ 1,100ಕ್ಕೆ ತಲುಪಿದೆ. ಅಳಿದುಳಿದಿರುವ ಸಂಪರ್ಕಗಳ ಸೇವೆಯಲ್ಲೂ ನಿರ್ವಹಣೆ ಇಲ್ಲದೆ ದಿನನಿತ್ಯ ವ್ಯತ್ಯಯ ಉಂಟಾಗುತ್ತಿದೆ. ಸಂಪರ್ಕ ಸ್ಥಗಿತಗೊಂಡರೂ ಮುಂದೆ ಸರಿಯಾಗಬಹುದು ಎನ್ನುವ ವಿಶ್ವಾಸದೊಂದಿಗೆ ಗ್ರಾಹಕರು ಪ್ರತಿ ತಿಂಗಳು ಬಿಲ್ ಮಾತ್ರ ಕಟ್ಟುತ್ತಿದ್ದಾರೆ.

ನೌಕರರ ಬವಣೆ: ತಾಲ್ಲೂಕಿನ ವಿವಿಧ ವಿನಿಮಯ ಕೇಂದ್ರಗಳಲ್ಲಿ 25 ಲೈನ್‌ಮನ್‌ಗಳು ದಿನಗೂಲಿಯಾಗಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಎಚ್‌ಕೆಎಲ್(ಹೌಸ್ ಕೀಪಿಂಗ್ ಲೇಬರ್) ಎಂದು ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ದಾಖಲೆಯಲ್ಲಿ ಇವರು ವಿನಿಮಯ ಕೇಂದ್ರವನ್ನು ಕಾಯುವವರು. ಇಲಾಖೆಯಲ್ಲಿ ತಾಂತ್ರಿಕ ಸಿಬ್ಬಂದಿ ಇಲ್ಲದ ಕಾರಣ ಕೇಬಲ್ ದುರಸ್ತಿ, ಟವರ್ ನಿರ್ವಹಣೆ ಮೊದಲಾದ ತಾಂತ್ರಿಕ ಕೆಲಸಗಳನ್ನೂ ಮಾಡಿಸಲಾಗುತ್ತಿದೆ.

ಈ ನೌಕರರ ಕಾಯಮಾತಿ ಬೇಡಿಕೆ ನ್ಯಾಯಾಲಯದ ಮೆಟ್ಟಿಲೇರದಂತೆ ತಡೆಯಲು ಈ ಹಿಂದೆ ಇದ್ದ ನಿತ್ಯಎಂಟುತಾಸು ಕೆಲಸವನ್ನು ಪ್ರಸ್ತುತಆರುತಾಸಿಗೆ ಇಳಿಸಲಾಗಿದೆ. ಜೊತೆಗೆ ಏಳುತಿಂಗಳಿನಿಂದಈ ನೌಕರರಿಗೆ ಸಂಬಳ ನೀಡಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಗುತ್ತಿಗೆ ಕಾರ್ಮಿಕರೊಬ್ಬರು.

‘ಅಹವಾಲಿಗೆ ಕಿವಿ ಕೊಡುತ್ತಿಲ್ಲ’:‘ಜಿಲ್ಲಾ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಸಂಬಳ ನೀಡುವಂತೆ 2– 3 ಬಾರಿ ಆಗ್ರಹಿಸಿದ್ದೇವೆ. ಭರವಸೆ ಸಿಕ್ಕಿದೆಯೇ ವಿನಾ ಪ್ರಯೋಜನವಾಗಿಲ್ಲ. ನಮ್ಮನ್ನು ಬಿಎಸ್ಎನ್ಎಲ್ ಸೇವೆಗೆ ನಿಯೋಜಿಸಿರುವ ವಿಶಾಲ್ ಮ್ಯಾನ್‌ಪವರ್ ಕಂಪನಿಯ ಮಾಲೀಕರು ಇಲಾಖೆಯಿಂದ ₹ 4 ಕೋಟಿ ಬರುವುದು ಬಾಕಿ ಇದೆ ಎನ್ನುತ್ತಾರೆ. ತುಳಿತಕ್ಕೆ ಒಳಗಾಗಿರುವ ನಮ್ಮ ಅಹವಾಲಿಗೆ ಸಂಬಂಧಿಸಿದವರು ಕಿವುಡಾಗಿದ್ದಾರೆ’ ಎಂದು ಬಿಎಸ್ಎನ್ಎಲ್ ದಿನಗೂಲಿ ನೌಕರರ ಜಿಲ್ಲಾ ಸಮಿತಿಯ ಸದಸ್ಯ ಗೋವಿಂದ ಮುಕ್ರಿ ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.