ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಡ್ರೈವ್ ಇನ್ ಹೋಟೆಲ್ ಬಳಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸಂಡಾ ನಿವಾಸಿ ಸಯ್ಯದ್ ಇಸ್ರಾರ್ ಬಂಧಿತ ಆರೋಪಿ. ಮುಂಡಗೋಡದಲ್ಲಿ ಅರಣ್ಯ ಇಲಾಖೆಯ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿಗೆ ಕೋವಿಡ್ ದೃಢಪಟ್ಟಿತ್ತು. ಹಾಗಾಗಿ ಅರಣ್ಯ ಇಲಾಖೆಯವರು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್ನ ತೀವ್ರ ನಿಗಾ ಘಟಕಕ್ಕೆ ಅ.10ರಂದು ದಾಖಲಿಸಿದ್ದರು.
ಆರೋಪಿಯು ಅ.11ರಂದು ರಾತ್ರಿ 2.30ರ ಸುಮಾರಿಗೆ ವಾರ್ಡ್ನಿಂದ ತಪ್ಪಿಸಿಕೊಂಡು ಬಂದಿದ್ದ. ಕಾರವಾರದಿಂದ ಪರಾರಿಯಾಗುವ ಸಲುವಾಗಿ, ಹೋಟೆಲ್ ಬಳಿ ನಿಲ್ಲಿಸಿದ್ದ ಬುಲೆಟ್ ಅನ್ನು ಕಳವು ಮಾಡಿದ್ದ. ತಮ್ಮ ವಾಹನ ಕಳವಾದ ಬಗ್ಗೆ ಅದರ ಮಾಲೀಕ, ನಗರದ ಅನೀಶ ಉಳ್ವೇಕರ್ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಬುಲೆಟ್ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ತನ್ನ ಕೃತ್ಯ ಗೊತ್ತಾಗಬಾರದು ಎಂದು ವಾಹನದ ಬಣ್ಣ ಹಾಗೂ ಆಕಾರವನ್ನು ಬದಲಿಸಿ,ನಂಬರ್ ಪ್ಲೇಟ್ ತೆಗೆದು ಸಂಚರಿಸುತ್ತಿದ್ದ. ಅಲ್ಲದೇ ಹೊಸ ಸಿಮ್ ಕಾರ್ಡ್ ಖರೀದಿಸಿ ಬಳಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಶೆಟ್ಟಿ, ನಗರ ಠಾಣೆ ಇನ್ಸ್ಪೆಕ್ಟರ್ಗಳಾದ ಸಂತೋಷ ಕುಮಾರ, ಎಸ್.ಬಿ.ಪೂಜಾರಿ, ಸಿಬ್ಬಂದಿ ಸತ್ಯಾನಂದ ನಾಯ್ಕ, ಮಂಜುನಾಥ ಗೊಂಡ, ಮುರಳೀಧರ ನಾಯ್ಕ, ರಾಜೇಶ ನಾಯಕ, ರಾಮ ನಾಯ್ಕ, ಮಹೇಶ ನಾಯ್ಕ ಹಾಗೂ ಮಹೇಶ ಟಾಕಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.