ADVERTISEMENT

‘ಸ್ಥಳೀಯರಿಗೆ ಮೊದಲು ಅಗತ್ಯ ನೀರು ಕೊಡಿ’

ಕಾಳಿ ನದಿ ನೀರಿನ ತಿರುವು ವಿರೋಧಿಸಿ ಜೊಯಿಡಾ ಬಂದ್ ವೇಳೆ ಪ್ರತಿಭಟನಾಕಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:59 IST
Last Updated 8 ಜುಲೈ 2019, 13:59 IST
ಜೊಯಿಡಾ ಬಂದ್ ವೇಳೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. 
ಜೊಯಿಡಾ ಬಂದ್ ವೇಳೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.    

ಜೊಯಿಡಾ: ಕಾಳಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸುವುದನ್ನು ವಿರೋಧಿಸಿ ಗ್ರಾಮ ಕೇಂದ್ರದಲ್ಲಿ ಸೋಮವಾರ ಬಂದ್ ಆಚರಿಸಲಾಯಿತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ಬೆಂಬಲ ಸೂಚಿಸಿದರು. ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು.

ಕಾಳಿ ಬ್ರಿಗೇಡ್,ವ್ಯಾಪಾರಸ್ಥರ ಸಂಘ ಹಾಗೂ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳ ನೇತೃತ್ವದಲ್ಲಿ ‘ಕಾಳಿ ನದಿ ರಕ್ಷಿಸಿ, ಜೊಯಿಡಾ ತಾಲ್ಲೂಕು ಉಳಿಸಿ‍’ ಎಂಬ ಘೋಷವಾಕ್ಯದಲ್ಲಿ ಬಂದ್ ಕರೆ ನೀಡಲಾಗಿತ್ತು.ಶಿವಾಜಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ನೂರಾರು ಪ್ರತಿಭಟನಾಕಾರರು,ತಹಶೀಲ್ದಾರ್ ಸಂಜಯ ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಳಿ ಬ್ರಿಗೇಡ್‌ನ ಸಂಚಾಲಕ ರವಿ ರೇಡ್ಕರ್, ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದರೂಕಾಳಿ ನದಿಯ ನೀರನ್ನು ಹೊರಜಿಲ್ಲೆಗಳಿಗೆ ಕೊಂಡೊಯ್ಯುವ ಹುನ್ನಾರ ನಡೆದಿದೆ. ಇದರ ಹಿಂದೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಭಿ ಕಾಣುತ್ತಿದೆ’ ಎಂದು ದೂರಿದರು.

ADVERTISEMENT

‘ಹಲವಾರು ಯೋಜನೆಗಳಿಂದ ಸಂತ್ರಸ್ತರಾಗಿರುವ ನಮ್ಮ ಜನರಿಗೆ ಮಾಡುವ ಮತ್ತೊಂದು ದ್ರೋಹ ಇದಾಗಿದೆ. ಇನ್ನು ಒಂದೇ ಒಂದು ಯೋಜನೆಯನ್ನೂ ಇಲ್ಲಿ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಹಳಿಯಾಳದ ಕುಮಾರ ಬೋಬಾಟೆ ಮಾತನಾಡಿ, ‘ಕಾಳಿ ನದಿ ಪಾತ್ರದ ಜನರಿಗೆ ಮೊದಲು ಕುಡಿಯುವ ನೀರು ಮತ್ತು ಕೃಷಿಗೆ ನೀಡುವಂತಾಗಬೇಕು. ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಜೊಯಿಡಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ಖಾಜಿ ಮಾತನಾಡಿ, ‘ಸೂಪಾ ನಿರಾಶ್ರಿತರಿಗೆ ಸರಿಯಾದ ರಸ್ತೆ, ಕುಡಿಯುವ ನೀರುಸೇರಿದಂತೆಮೂಲ ಸೌಕರ್ಯವನ್ನು ಇಂದಿಗೂ ಒದಗಿಸಿಲ್ಲ. ಕೋಟಿರೂಪಾಯಿಗಳ ಲೆಕ್ಕದಲ್ಲಿ ಕುಡಿಯುವ ನೀರಿಗೆ ಹಣ ಖರ್ಚು ಮಾಡಲಾಗಿದೆ. ಆದರೂರಾಮನಗರದಲ್ಲಿ 15 ದಿನ, ಜೊಯಿಡಾದಲ್ಲಿ ವಾರಕ್ಕೆ ಒಂದು ಸಲ ನೀರು ಬರುತ್ತದೆ. ಕಾಳಿ ನದಿಯ ನೀರನ್ನು ಮೊದಲು ನಮ್ಮ ಜನರಿಗೆ ಕೊಡಬೇಕು’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತುಕಾರಾಂ ಮಾಂಜ್ರೇಕರ್ ಮಾತನಾಡಿ, ‘ಸೂಪಾ ನಿರಾಶ್ರಿತರ ಕೇಂದ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದ್ದರೂ ಎಲ್ಲವೂ ಸರಿಯಿದೆ ಎಂದು ಕೆ.ಪಿ.ಸಿ ಮತ್ತು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ’ ಎಂದು ಆರೋ‍ಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ,ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ ಬಂಗಾರಿ, ಜೊಯಿಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ಉಪಾಧ್ಯಕ್ಷ ಶ್ಯಾಮ ಪೋಕಳೆ, ದಾಂಡೇಲಿ ಕಾಳಿ ಹೋರಾಟ ಸಮಿತಿಯ ವಾಸುದೇವ ಪ್ರಭು, ಕುಂಬಾರವಾಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ ಕಾಮತ್, ಉಳವಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಶಿವಾಜಿ ಗೋಸಾವಿ, ಪ್ರೇಮಾನಂದ ವೇಳಿಪ, ದೇವಿದಾಸ ವೇಳಿಪ ಇದ್ದರು.ಜೊಯಿಡಾ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ ಹೂಗಾರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.