ADVERTISEMENT

ಕಾರವಾರ: ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ತಂಗುದಾಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 13:18 IST
Last Updated 28 ಆಗಸ್ಟ್ 2020, 13:18 IST
ಕುಮಟಾ ತಾಲ್ಲೂಕಿನ ಹಿರೇಗುತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ಹಳೆಯ ಬಸ್ ತಂಗುದಾಣದ ಕಟ್ಟಡ
ಕುಮಟಾ ತಾಲ್ಲೂಕಿನ ಹಿರೇಗುತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ಹಳೆಯ ಬಸ್ ತಂಗುದಾಣದ ಕಟ್ಟಡ   

ಕಾರವಾರ: ಕುಮಟಾದ ತಾಲ್ಲೂಕಿನ ಹಿರೇಗುತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ಹಳೆಯ ಬಸ್ ತಂಗುದಾಣವು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ತಂಗುದಾಣದ ಚಾವಣಿಯು ರಸ್ತೆಗೆ ಚಾಚಿಕೊಂಡಿದ್ದು, ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆಯಿದೆ.

ಗೋಕರ್ಣದ ಲಯನ್ಸ್ ಕ್ಲಬ್‌ ನಿರ್ಮಿಸಿದ್ದಈ ತಂಗುದಾಣ ಆಗ ಹೆದ್ದಾರಿಯಿಂದ ಸಾಕಷ್ಟು ದೂರದಲ್ಲಿತ್ತು. ಆದರೆ, ಚತುಷ್ಪಥ ಕಾಮಗಾರಿ ಕೈಗೊಂಡ ಬಳಿಕ ಹೆದ್ದಾರಿ ಅದರ ಅಂಚಿನಲ್ಲೇ ಸಾಗಿದೆ. ಹಳೆಯ ತಂಗುದಾಣದ ಬದಲಿಗೆ ಹಿಂಬದಿಯಲ್ಲಿ ಹೊಸ ಬಸ್ ತಂಗುದಾಣವನ್ನು ಕಾಮಗಾರಿಯ ಗುತ್ತಿಗೆ ಪಡೆದ ಐ.ಆರ್.ಬಿ ಸಂಸ್ಥೆಯವರು ನಿರ್ಮಿಸಿದ್ದಾರೆ. ಅಲ್ಲಿಗೆ ಪ್ರತ್ಯೇಕ ರಸ್ತೆಯನ್ನೂ ವ್ಯವಸ್ಥೆ ಮಾಡಿದ್ದಾರೆ. ಆದರೆ, ಹಳೆಯ ಕಟ್ಟಡವನ್ನು ತೆರವು ಮಾಡಿಲ್ಲ. ಕಟ್ಟಡದ ಚಾವಣಿಗೆ ಪ್ರತಿಫಲಕ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಸೂಚನೆಗಳು ಇಲ್ಲಿಲ್ಲ.

ರಾತ್ರಿ ವಾಹನ ಚಲಾಯಿಸುವಾಗ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಪ್ರಖರ ಬೆಳಕಿನಿಂದ ಹಳೆಯ ಬಸ್ ತಂಗುದಾಣ ಅಸ್ಪಷ್ಟವಾಗಿ ಕಾಣುತ್ತದೆ. ಜೋರು ಮಳೆಯೂ ಇದ್ದರೆ ಇನ್ನೂ ಸಮಸ್ಯೆಯಾಗುತ್ತದೆ. ಬೀಡಾಡಿ ದನಕರುಗಳೂ ಈ ಕಟ್ಟಡದ ಬಳಿ ಮಲಗಿರುತ್ತವೆ. ಇದನ್ನು ಗಮನಿಸದೇ ಹೋದರೆ ವಾಹನ ಚಾಲಕರು ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ADVERTISEMENT

‘ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಹೆದ್ದಾರಿ ವಿಸ್ತೀರ್ಣದ ಸಂದರ್ಭದಲ್ಲಿ ರಸ್ತೆ ಅಂಚಿನ ಗಡಿಯಿಂದ ನಿರ್ದಿಷ್ಟ ಅಂತರದಲ್ಲಿರುವ ಅಸುರಕ್ಷಿತ ಕಟ್ಟಡಗಳನ್ನು ತೆರವುಗೊಳಿಸಬೇಕು. ಆದರೆ, ಇಲ್ಲಿ ಈ ನಿಯಮವನ್ನು ಪಾಲಿಸಿಲ್ಲ. ಪ್ರಯಾಣಿಕರ ಮತ್ತು ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ವಾಹನ ಸವಾರ, ಹೊನ್ನಾವರದ ನಾಗರಾಜ.ಜಿ.ಮೇಸ್ತ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.