ADVERTISEMENT

ಎರಡನೇ ಮಹಡಿಯಲ್ಲಿ ಸಿಕ್ಕಿಕೊಂಡಿದ್ದ ಬೆಕ್ಕಿನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 15:10 IST
Last Updated 26 ಮಾರ್ಚ್ 2022, 15:10 IST
ಕುಮಟಾ ನ್ಯಾಯಾಲಯ ಕಟ್ಟಡದ ಎರಡನೇ ಮಹಡಿಯ ಕಿಟಕಿ ಲಿಂಟಲ್‌ನಿಂದ ಇಳಿಯಲಾಗದೇ ಪರದಾಡುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕುಮಾರ ಗೌಡ ಶನಿವಾರ ರಕ್ಷಿಸುತ್ತಿರುವುದು.
ಕುಮಟಾ ನ್ಯಾಯಾಲಯ ಕಟ್ಟಡದ ಎರಡನೇ ಮಹಡಿಯ ಕಿಟಕಿ ಲಿಂಟಲ್‌ನಿಂದ ಇಳಿಯಲಾಗದೇ ಪರದಾಡುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕುಮಾರ ಗೌಡ ಶನಿವಾರ ರಕ್ಷಿಸುತ್ತಿರುವುದು.   

ಕುಮಟಾ: ಇಲ್ಲಿಯ ನ್ಯಾಯಾಲಯ ಕಟ್ಟಡದಲ್ಲಿ ಶನಿವಾರ, ಎರಡನೇ ಮಹಡಿಯ ಲಿಂಟಲ್ ಏರಿ, ಕೆಳಗೆ ಇಳಿಯಲು ದಾರಿ ಕಾಣದೆ ಪರದಾಡುತ್ತಿದ್ದ ಬೆಕ್ಕನ್ನು ಅಗ್ನಿ ಶಾಮಕದಳ ಸಿಬ್ಬಂದಿ ಶನಿವಾರ ರಕ್ಷಿಸಿದರು.

ಬೆಳಿಗ್ಗೆ ಬೆಕ್ಕು ಅರಚುತ್ತಿದ್ದ ಸದ್ದು ಕೇಳಿದ ನ್ಯಾಯಾಲಯದ ಸಿಬ್ಬಂದಿ, ಅದು ಅಪಾಯದಲ್ಲಿರುವುದನ್ನು ಗ್ರಹಿಸಿದರು. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ರಕ್ಷಿಸುವಂತೆ ಕೋರಿದರು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಬೆಕ್ಕು ಕಿಟಕಿಯ ಲಿಂಟಲ್ ಮೇಲೆ ಕುಳಿತು ಸಹಾಯಕ್ಕಾಗಿ ಅತ್ತಿತ್ತ ನೋಡುತ್ತಿತ್ತು.

‘ಎರಡನೇ ಮಹಡಿ ಏರಿ ಅದರ ಬಾಲ್ಕನಿ ಮೂಲಕ ಕಿಟಕಿ ಲಿಂಟಲ್ ಮೇಲೆ ಸಾಗಿ ಬೆಕ್ಕಿನ ಬಳಿ ಬಂದಾಗ ಮೊದಲು ಅದು ಕೂಗಿ ಹೆದರಿಸಿತು. ಭಯದಿಂದ ಅದು ಕೆಳಗೆ ಜಿಗಿಯದಂತೆ ನಿಧಾನವಾಗಿ ಬಳಿ ಸಾಗಿ, ಅದನ್ನು ಹಿಡಿದು ಚೀಲದಲ್ಲಿ ಹಾಕಿ ಕೆಳಗೆ ಬಿಟ್ಟೆ’ ಎಂದು ಬೆಕ್ಕನ್ನು ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಕುಮಾರ ಗೌಡ ತಿಳಿಸಿದರು. ಈ ಕಾರ್ಯಕ್ಕಾಗಿ ನ್ಯಾಯಾಲಯ ಸಿಬ್ಬಂದಿ, ಸಾರ್ವಜನಿಕರು ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಶ್ಲಾಘಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.