ಭಟ್ಕಳ: ಪಟ್ಟಣದಲ್ಲಿ ಪುರಸಭೆಯಿಂದ ಅಳವಡಿಸಿದ ಸಿ.ಸಿ.ಟಿ.ವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಪಟ್ಟಣದ ಶಂಸುದ್ದೀನ್ ವೃತ್ತ ಹೊರತುಪಡಿಸಿ ಉಳಿದ ಎಲ್ಲಾ ಕಡೆ ನಿಷ್ಕ್ರಿಯಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ಭಟ್ಕಳದಲ್ಲಿ ಆಗಾಗ ಅಪರಾಧ ಚಟುವಟಿಕೆಗಳು ನಡೆಯುತ್ತಿರುತ್ತವೆ. ಪಟ್ಟಣ ವ್ಯಾಪ್ತಿಯಲ್ಲಿ ಒಂದು ಸಣ್ಣ ಅಪಘಾತವಾದರೂ ಕ್ಷಣದಲ್ಲಿ ನೂರಾರು ಜನ ಸ್ಥಳದಲ್ಲಿ ಜಮಾವಣೆಗೊಳ್ಳುತ್ತಾರೆ. ಇಂತಹ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳ ಹಾಗೂ ವಾಹನಗಳ ಚಲನವಲನಗಳ ಮೇಲೆ ನಿಗಾ ಇರಿಸಲು 2015ರಲ್ಲಿ ₹ 28 ಲಕ್ಷ ಅನುದಾನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಹಳ್ಳ ಹಿಡಿದ ಯೋಜನೆ:
ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಮಯೂರ ಇಸ್ಫೋಟೆಕ್ ಕಂಪನಿ ಪಡೆದಿತ್ತು. ಕ್ಯಾಮೆರಾಗಳ ನಿಗಾ ಘಟಕವನ್ನು ಶಹರ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗೊತ್ತು. ಮೊದಮೊದಲು ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಕ್ಯಾಮೆರಾಗಳು ನಂತರ ನಿರ್ವಹಣೆ ಇಲ್ಲದೇ ನಿಷ್ಕ್ರಿಯಗೊಂಡಿವೆ.
ಪುರಸಭೆ ಹಾಗೂ ಜಾಲಿ ಪಟ್ಟಣದ ಪ್ರಮುಖ ಸೂಕ್ಷ್ಮ ಸ್ಥಳಗಳ ಕಣ್ಗಾವಲಿಗಾಗಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ 27 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ನೀಡಲಾಗಿದೆ. ಪುರಸಭೆ ಅಳವಡಿಸಿದ್ದ ಪ್ರದೇಶಗಳ ಹೊರತುಪಡಿಸಿ ಉಳಿದ ಸೂಕ್ಷ್ಮ ಪ್ರದೇಶಗಳಲ್ಲಿ ಅವುಗಳನ್ನು ಅಳವಡಿಸಿಲಾಗಿದೆ. ಅವು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಅನುದಾನ ಲಭ್ಯವಿಲ್ಲ’:
‘ಪುರಸಭೆ ಅನುದಾನದಿಂದ ಪಟ್ಟಣದಿಂದ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು 2015ರಲ್ಲೇ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಹಾಗಾಗಿ ಅವುಗಳನ್ನು ನಾವು ನೋಡಿಕೊಳ್ಳುವುದಿಲ್ಲ. ನಿರ್ವಹಣೆ ಇಲ್ಲದ ಕಾರಣ ಸಿ.ಸಿ.ಟಿ.ವಿ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಅನುದಾನದ ಕೊರತೆ ಇರುವ ಕಾರಣ ಅವುಗಳ ನಿರ್ವಹಣೆ ಪುರಸಭೆಯಿಂದ ಸಾಧ್ಯವಿಲ್ಲ’ ಎನ್ನುತ್ತಾರೆ ಭಟ್ಕಳ ಪುರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಮಡಿವಾಳ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.