ADVERTISEMENT

ಕಾರು ಪ್ರಯಾಣಿಕನ ಸರ ಹರಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 15:18 IST
Last Updated 12 ಮಾರ್ಚ್ 2020, 15:18 IST

ಭಟ್ಕಳ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಜಾಗಟೆಬೈಲ್ ಸಮೀಪ ಗುರುವಾರ ಹಾಡಹಗಲೇ ಡಿಯೋ ಸ್ಕೂಟರ್‌ನಲ್ಲಿ ಬಂದ ಮೂವರು ಕಳ್ಳರು ಓಮ್ನಿ ಕಾರಿನಲ್ಲಿ ಶಿರೂರ್‌ನಿಂದ ಶಿರಾಲಿಗೆ ಕುಟುಂಬದವರೊಂದಿಗೆ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.

ತಾಲ್ಲೂಕಿನ ಮೂಡುಶಿರಾಲಿಯ ಜಗದೀಶ ಮಾದೇವ ನಾಯ್ಕ ಎಂಬುವವರು ₹ 1ಲಕ್ಷ ಮೌಲ್ಯದ ಎರಡೂವರೆ ತೊಲೆ ಚಿನ್ನರ ಸರ ಕಳೆದುಕೊಂಡವರು. ಸ್ಕೂಟರ್‌ನಲ್ಲಿದ್ದ ಮೂವರ ಪೈಕಿ ಒಬ್ಬ, ಜಗದೀಶ ಅವರ ಕುತ್ತಿಗೆಗೆ ಕೈಹಾಕಿ ಚಿನ್ನದ ಸರ ಎಗರಿಸಿದ್ದಾನೆ. ತಕ್ಷಣ ಸಮಯಪ್ರಜ್ಞೆ ಮೆರೆದ ಜಗದೀಶ್ ಹಾಗೂ ಅವರ ಸಹೋದರ, ಕಾರಿನಲ್ಲೇ ಸರ ಎಗರಿಸಿದವರನ್ನು ಹಿಂಬಾಲಿಸಿ, ಹಿಡಿದು ಥಳಿಸಿದ್ದಾರೆ. ಇದನ್ನು ಕಂಡು ನೂರಾರು ಜನರು ಜಮಾಯಿಸಿ ಏನಾಯಿತೆಂದು ವಿಚಾರಿಸಿದರು. ಜಗದೀಶ ಅವರನ್ನು ಸಮಾಧಾನಪಡಿಸಿ ಕಾರಿನತ್ತ ಕರೆದುಕೊಂಡು ಹೋಗುವಷ್ಟರಲ್ಲಿ, ಮೂವರು ಕಳ್ಳರು ಸ್ಕೂಟರ್ ಏರಿ ಪರಾರಿಯಾಗಿದ್ದಾರೆ. ಕಳ್ಳರ ಪೈಕಿ ಒಬ್ಬ ವ್ಯಕ್ತಿಯನ್ನು ಜನರು ಗುರುತಿಸಿದ್ದಾರೆ. ಜಗದೀಶ ಅವರ ಕುತ್ತಿಗೆಗೆ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT