ADVERTISEMENT

ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತದ ಸಂಭ್ರಮ: ಬ್ರಹ್ಮಾನಂದ ಶ್ರೀಗಳ ವ್ರತ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:19 IST
Last Updated 10 ಜುಲೈ 2025, 4:19 IST
9ಕೆಎಂಟಿ3ಇಪಿ: ಶ್ರೀರಾಮ ಕ್ಷೇತ್ರದ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
9ಕೆಎಂಟಿ3ಇಪಿ: ಶ್ರೀರಾಮ ಕ್ಷೇತ್ರದ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ   

ಕುಮಟಾ: ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಈ ವರ್ಷದ ಚಾತುರ್ಮಾಸ ವ್ರತ ಆಚರಣೆಗೆ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪ ಸಜ್ಜುಗೊಂಡಿದ್ದು, ಇದಕ್ಕಾಗಿಯೇ ವಿಶೇಷ ‘ಗುರು ಭವನ’ ನಿರ್ಮಾಣಗೊಂಡಿದೆ.

ಸಂಯಮ, ಶೃದ್ಧೆಯ ಪ್ರತೀಕವಾಗಿರುವ, ಆಧ್ಯಾತ್ಮಿಕ ಪ್ರಗತಿಗೆ ಸಹಕಾರಿ ಆಗಲಿದೆ ಎಂಬ ನಂಬಿಕೆ ಹೊಂದಿರುವ ಚಾತುರ್ಮಾಸ ವೃತಾಚರಣೆಗೆ ಬಹುಪ್ರಾಮುಖ್ಯತೆ ಇದೆ. ಸ್ವಾಮೀಜಿ ಈ ಬಾರಿ ಕುಮಟಾದ ಕೋನಳ್ಳಿಯನ್ನು ಪವಿತ್ರ ಚಾತುರ್ಮಾಸ ವೃತಾಚರಣೆಗೆ ಆಯ್ದುಕೊಂಡಿರುವುದು ಈ ಭಾಗದ ಭಕ್ತ ವಲಯದಲ್ಲಿ ಸಂತಸ ಇಮ್ಮಡಿಸಿದೆ.

ಚಾತುರ್ಮಾಸ ವ್ರತಾಚರಣೆಯನ್ನು ಇಲ್ಲಿಯೇ ಕೈಗೊಳ್ಳಲು ಕೋನಳ್ಳಿ ವನದುರ್ಗಾ ದೇವಾಲಯ ಹಾಗೂ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ಅವರ ನೇತೃತ್ವದ ನಿಯೋಗ ಕಳೆದ ವರ್ಷವೇ ಸ್ವಾಮೀಜಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ವಾಮೀಜಿ ಸಮ್ಮತಿಸಿದ್ದರು. ಚಾತುರ್ಮಾಸ ವ್ರತಾಚರಣೆ ಸಂದರ್ಭದಲ್ಲಿ ಶ್ರೀಗಳ ವಾಸ್ತವ್ಯಕ್ಕಾಗಿ ಕೋನಳ್ಳಿ ಗ್ರಾಮಸ್ಥರು ಸುಮಾರು ₹40 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಗುರು ಭವನ ನಿರ್ಮಿಸಿದ್ದಾರೆ.

ADVERTISEMENT

ಕೋನಳ್ಳಿಯಲ್ಲಿ ನಡೆಯುವ ಚಾತುರ್ಮಾಸ ವ್ರತವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಚಾತುರ್ಮಾಸ್ಯ ಸಮನ್ವಯ ಸಮಿತಿ ಹಗಲಿರಳು ಶ್ರಮಿಸುತ್ತಿದೆ.

‘ಕೋನಳ್ಳಿಯಲ್ಲಿ ಚಾತುರ್ಮಾಸ ನಡೆಸುವಂತೆ ಗ್ರಾಮಸ್ಥರೆಲ್ಲ ಸೇರಿ ಶ್ರೀಗಳಲ್ಲಿ ಕೇಳಿಕೊಂಡಾಗ ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಅವರು ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಪ್ರತಿಯಾಗಿ ನಾವು ಕಾರ್ಯಕ್ರಮ ಯಶಸ್ವಿಗೊಳಿಸಲು ಪಣ ತೊಟ್ಟಿದ್ದೇವೆ. ಎಲ್ಲ ಸಮಾಜದ ಬಂಧುಗಳು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಸೋದರತ್ವ ಬಿತ್ತುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದು ಶ್ರೀಗಳ ಆಶಯವೂ ಹೌದು. ಸುತ್ತಲಿನ ಎಲ್ಲ ಸಮಾಜದ ಬಂಧುಗಳು ಕಾಯಕ್ರಮದ ತಯಾರಿಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ತಿಳಿಸಿದರು.

‘1008 ಮಹಾಮಂಡಲೇಶ್ವರ’ ಬಿರುದು
2008ರಲ್ಲಿ ಶ್ರೀ ರಾಮ ಕ್ಷೇತ್ರದ ಅಂದಿನ ಸ್ವಾಮೀಜಿ ಶ್ರೀ ಆತ್ಮಾನಂದ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಕ್ಷೇತ್ರದ ಪೀಠಾಧೀಶರಾದರು. ತಮ್ಮ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಔದ್ಯೋಗಿಕ ತರಬೇತಿ ನೀಡುವ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಶ್ರೀಗಳು ಗಮನ ಸೆಳೆದರು. ಈ ವರ್ಷ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಅಲ್ಲಿಯ ನಾಗಾ ಸಾಧುಗಳಿಂದ ‘1008 ಶ್ರೀಮಹಾ ಮಂಡಲೇಶ್ವರ’ ಎಂಬ ಸ್ಥಾನಮಾನ ಪಡೆದಿರುವುದು ವಿಶೇಷ. ಹರಿದ್ವಾರದಲ್ಲಿ ತಮ್ಮ ಶಾಖಾ ಮಠ ಸ್ಥಾಪಿಸಿರುವ ಶ್ರೀಗಳು ಅಯೋಧ್ಯೆಯಲ್ಲೂ ಶಾಖಾಮಠ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.