ADVERTISEMENT

ಕೊಚ್ಚಿಹೋದ ಗುಳ್ಳಾಪುರ - ಕಲ್ಲೇಶ್ವರ ಸೇತುವೆ ಸ್ಥಿತಿಗತಿ ವೀಕ್ಷಿಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 3:33 IST
Last Updated 30 ಜುಲೈ 2021, 3:33 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಳ್ಳಾಪುರ ಸೇತುವೆಯನ್ನು ವೀಕ್ಷಿಸಿದರು. ಶಾಸಕ ಶಿವರಾಮ ಹೆಬ್ಬಾರ ಇದ್ದಾರೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಳ್ಳಾಪುರ ಸೇತುವೆಯನ್ನು ವೀಕ್ಷಿಸಿದರು. ಶಾಸಕ ಶಿವರಾಮ ಹೆಬ್ಬಾರ ಇದ್ದಾರೆ   

ಅಂಕೋಲಾ: ಗಂಗಾವಳಿ ನದಿಯ ಭೀಕರ ಪ್ರವಾಹದ ಪರಿಣಾಮ, ಕೊಚ್ಚಿಹೋದ ಗುಳ್ಳಾಪುರ- ಕಲ್ಲೇಶ್ವರ ಸೇತುವೆಯ ಸ್ಥಿತಿಗತಿಯನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.

ಶಾಸಕ ಶಿವರಾಮ ಹೆಬ್ಬಾರ, ಸೇತುವೆ ಕೊಚ್ಚಿ ಹೋದ ಪರಿಣಾಮ 10 ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ವಾಸ್ತವ ಸ್ಥಿತಿ ವಿವರಿಸಿದರು.

ಅಂಕೋಲಾ ತಾಲ್ಲೂಕಿನ ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೆರೆ ಹಾನಿ ಮತ್ತು ಕಾಳಜಿ ಕೇಂದ್ರದ ವ್ಯವಸ್ಥೆ ಪರಿಶೀಲಿಸಿದರು. ನಂತರ ತಾಲ್ಲೂಕಿನ ನಾಡವರ ಸಭಾ ಭವನದಲ್ಲಿ ಆಯೋಜಿಸಿದ್ದ, ಸಭೆಯಲ್ಲಿ ಪಾಲ್ಗೊಂಡರು.

ADVERTISEMENT

ಕಾರ್ಯಕ್ರಮದ ನಂತರ ಸಾರ್ವಜನಿಕರು ತಮ್ಮ ಅಹವಾಲು ಅರ್ಜಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಬಿಜೆಪಿ ಮಂಡಲ ಘಟಕದ ವತಿಯಿಂದ ಸಂಜಯ ನಾಯ್ಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ತಾಲ್ಲೂಕು ಗಂಗಾವಳಿ ನದಿಯ ಪ್ರವಾಹದಿಂದ ಕಂಗೆಟ್ಟಿದೆ. ಹಿಂದಿಗಿಂತಲೂ ಅಪಾರ ಹಾನಿ ಸಂಭವಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಒದಗಿಸಿ, ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕೊಂಕಣ ರೈಲ್ವೆ ಅನ್ಯಾಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈಲ್ವೆ ಸೇವಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಕೊಂಕಣ ರೈಲ್ವೆ ನಿಗಮದ ಎರಡನೇ ದೊಡ್ಡ ಪಾಲುದಾರ ಕರ್ನಾಟಕ ಸರ್ಕಾರವಾಗಿದೆ. ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳು 300 ಕಿ.ಮೀ ಜಾಗವನ್ನು ಕೊಂಕಣ ರೈಲ್ವೆಗೆ ಬಿಟ್ಟುಕೊಟ್ಟಿವೆ. ಕೊಂಕಣ ರೈಲ್ವೆ ಮಂಡಳಿ ಕರಾವಳಿ ಜನವಿರೋಧಿ ನೀತಿಗಳನ್ನು ಹೊಂದಿದೆ. ಕಾರವಾರ ಯಶವಂತಪುರ ರೈಲು ಮರು ಆರಂಭ ಮಾಡಬೇಕು. ಕೊಂಕಣ ರೈಲ್ವೆ ಅನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸಲು ಶಿಫಾರಸು ಸಲ್ಲಿಸಿ. ಕೊಂಕಣ ರೈಲ್ವೆ ಮಂಡಳಿಯ ಅನ್ಯಾಯಗಳ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.