ಕಾರವಾರ: ಬಿ.ಪಿ.ಎಲ್ ಹಾಗೂ ಎ.ಪಿ.ಎಲ್ ಪಡಿತರ ಚೀಟಿದಾರರು ಸರ್ಕಾರದಿಂದ ಉಚಿತವಾಗಿ ಆರೋಗ್ಯ ಸೇವೆಗಳನ್ನು ಪಡೆಯಲು ಇನ್ನು ಮುಂದೆ, ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯ ‘ಕೋ ಬ್ರಾಂಡೆಡ್ ಕಾರ್ಡ್’ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
‘ಆಭಾ ರಿಜಿಸ್ಟ್ರೇಷನ್’ (ಆಯುಷ್ಮಾನ್ ಭಾರತ ಆರೋಗ್ಯ ಖಾತೆ ಸಂಖ್ಯೆ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಎರಡನ್ನೂ ಒಟ್ಟಾಗಿ ಸೇರಿಸಲಾಗಿರುವ ಚೀಟಿ) ಕಾರ್ಯವು ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಆರಂಭವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿರುವ 231 ‘ಗ್ರಾಮ ಒನ್’ ಕೇಂದ್ರಗಳಲ್ಲಿ ಉಚಿತವಾಗಿ ಈ ಚೀಟಿಗಳನ್ನು ವಿತರಿಸಲಾಗುತ್ತಿದೆ.
ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ 12.38 ಲಕ್ಷ ಮಂದಿಗೆ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚೀಟಿಯನ್ನು ಪಡೆದುಕೊಂಡರೆ ಅದರೊಂದಿಗೆ ‘ಆಭಾ’ ನೋಂದಣಿಯನ್ನು ಮಾಡಲಾಗುತ್ತದೆ. ಇದರ ಮೂಲಕ ಆರೋಗ್ಯ ಸೇವೆ ಪಡೆಯುವವರು ಹಾಗೂ ನೀಡುವ ಸರ್ಕಾರಿ ಖಾಸಗಿ ಆಸ್ಪತ್ರೆಗಳು, ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಡಿಜಿಟಲ್ ವ್ಯವಸ್ಥೆಗೆ ತರಲಾಗುತ್ತದೆ.
ನೋಂದಣಿಯಾದ ವ್ಯಕ್ತಿಗೆ ಯಾವುದೇ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮಾಹಿತಿಗಳನ್ನು ದಾಖಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಆಧಾರದ ಮೇಲೆ ಜೀವನ ಪರ್ಯಂತ ಚಿಕಿತ್ಸೆ ಮುಂದುವರಿಯುತ್ತದೆ. ಇದಲ್ಲದೇ ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಗತ್ಯ ವೈದ್ಯರು, ಆಸ್ಪತ್ರೆಯ ಸೇವೆ ಪಡೆಯಬಹುದಾಗಿದೆ.
ಹೆಸರು ಬದಲಾವಣೆ:
ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ₹ 5 ಲಕ್ಷ ಹಾಗೂ ಎ.ಪಿ.ಎಲ್ ಚೀಟಿದಾರರಿಗೆ ₹ 1.50 ಲಕ್ಷವನ್ನು (ಚಿಕಿತ್ಸೆಯ ಶೇ 30ರಷ್ಟು) ಸರ್ಕಾರದಿಂದ ನೀಡಲಾಗುತ್ತದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಸೇವೆಯನ್ನು ಈವರೆಗೆ ನೀಡಲಾಗುತ್ತಿತ್ತು. ಈಗ ಅದನ್ನು ‘ಎ.ಬಿ– ಎ.ಆರ್.ಕೆ’ಯಿಂದ ‘ಎ.ಬಿ– ಪಿ.ಎಂ.ಜೆ.ಎ.ವೈ ಕಾರ್ಡ್’ ಎಂದು ಬದಲಿಸಲಾಗಿದೆ. ಪಿ.ವಿ.ಸಿ ಸ್ಮಾರ್ಟ್ ಕಾರ್ಡ್ಗಳನ್ನು ಗ್ರಾಮ ಒನ್ ಕೇಂದ್ರಗಳಲ್ಲಿಯೇ ನೀಡಲಾಗುತ್ತದೆ.
ಮೊಬೈಲ್ ಫೋನ್ ನಂಬರ್ ಜೋಡಣೆ ಆಗಿರುವ ಆಧಾರ್ ಕಾರ್ಡ್, ಪಡಿತರ ಚೀಟಿ ಇರಬೇಕು. ಒಂದು ವೇಳೆ ಜೋಡಣೆ ಆಗಿರದಿದ್ದರೆ, ಕಾರ್ಡ್ ಮಾಡಿಸಬೇಕಿರುವವರು ನೇರವಾಗಿ ಬಂದು ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಮಾಡಿಸಿ ಕಾರ್ಡ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.