ಭಟ್ಕಳ: ಮಳೆ ಬಂತೆಂದರೆ, ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೈಟೆಕ್ ಬಸ್ ನಿಲ್ದಾಣದ ಮುಂಭಾಗ ಕೆಸರು ಗದ್ದೆಯಾಗಿ ಮಾರ್ಪಡುತ್ತಿದೆ. ಆದರೂ ಇದನ್ನು ಸರಿಪಡಿಸಲು ಸಂಸ್ಥೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರು ನೀರು ನಿಂತಿದ್ದು, ಪ್ರಯಾಣಿಕರನ್ನು ಅದನ್ನು ದಾಟಿಕೊಂಡೇ ಹೋಗಬೇಕಾಗಿದೆ. ಅಷ್ಟರಲ್ಲಿ ಯಾವುದಾದರೂ ವಾಹನ ಬಂದರೆ ಮೈ ತುಂಬಾ ಕೆಸರು ಸಿಡಿಯುತ್ತದೆ. ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ಲಾಟ್ಫಾರಂ ನಿರ್ಮಾಣ ಮಾಡಿಲ್ಲ. ಬೇಸಿಗೆಯಲ್ಲಿ ಮೇಲೇಳುವ ದೂಳಿನ ನಡುವೆ ಪ್ರಯಾಣಿಕರು ಸಾಗಿದರೆ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾಗಿದೆ.
ಈ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಮಳಿಗೆಗಳಿದ್ದು, ವ್ಯಾಪಾರ ವಹಿವಾಟು ಸದಾ ನಡೆಯುತ್ತಿರುತ್ತದೆ. ಆದರೆ, ಕೆಸರು ನೀರು ನಿಂತಿರುವುದರಿಂದ ಯಾರೂ ನಿಲ್ದಾಣದ ಒಳಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ಒಂದುವೇಳೆ ಹೋದರೂ ಹಿಡಿಶಾಪ ಹಾಕುತ್ತಾ ತೆರಳುತ್ತಾರೆ.
‘ಬಸ್ ನಿಲ್ದಾಣದ ಎದುರು ಕೆಸರು ನೀರು ನಿಂತರೂ ಅದನ್ನು ಸರಿ ಪಡಿಸಲು ಸಂಸ್ಥೆ ಕ್ರಮ ಕೈಗೊಂಡಿಲ್ಲ. ನಿತ್ಯವೂ ಈ ಕೆಸರನ್ನು ದಾಟಿ ನಾವು ಪ್ರಯಾಣಿಸಬೇಕು. ನಮ್ಮಿಂದ ಟಿಕೆಟ್ ದರ ಪಡೆಯುವ ಸಂಸ್ಥೆಯು, ನಿಲ್ದಾಣದಲ್ಲಿ ಮೂಲ ಸೌಕರ್ಯ ಸರಿಪಡಿಸುವತ್ತ ಕೂಡ ಗಮನ ಹರಿಸಬೇಕು’ ಎನ್ನುತ್ತಾರೆ ಬ್ಯಾಂಕ್ ಉದ್ಯೋಗಿಕುಮಟಾದ ರಾಘವೇಂದ್ರ ನಾಯ್ಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.