ಯಲ್ಲಾಪುರ: ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ (ಎಸ್.ಎಫ್.ಜೆ) ಸಂಘಟನೆಯಿಂದ ದೇಶವಿರೋಧಿ ಚಟುವಟಿಕೆಗಳ ಟ್ವೀಟ್ಗೆ ಅವಕಾಶ ನೀಡಿದ ಆರೋಪದಲ್ಲಿ ಟ್ವಿಟರ್ ಸಂಸ್ಥೆಯ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಬಿ.ಜೆ.ಪಿ. ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ ದೂರು ನೀಡಿದವರು. ಪಂಜಾಬ್ ಅನ್ನು ಖಲಿಸ್ತಾನ ಎಂಬ ಹೆಸರಿನಲ್ಲಿ ಭಾರತದಿಂದ ಬೇರ್ಪಡಿಸುವ ಸಂಚನ್ನು ರೂಪಿಸಿದ್ದ ಎಸ್.ಎಫ್.ಜೆ.ಯನ್ನು 2019ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಗುರುಪತ್ವ ಸಿಂಗ್ಅದರ ಮುಖ್ಯಸ್ಥನಾಗಿದ್ದಾರೆ. ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಸಂಘಟನೆಯ ಟ್ವಿಟರ್ ಖಾತೆ ಸಕ್ರಿಯವಾಗಿದೆ. ಅದರಲ್ಲಿ ಭಾರತ ವಿರೋಧಿ ಸಂಗತಿಗಳನ್ನು, ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸುವಂತಹ ಟ್ವೀಟ್ಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಅವುಗಳನ್ನು ಟ್ವಿಟರ್ ಪ್ರತಿನಿಧಿಗಳಾದ ಶಗುಪ್ತಾ ಕಮ್ರಾನ್ ಹಾಗೂ ಮಹಿಮಾ ಕೌಲ್ ಎಂಬುವವರು ವ್ಯಾಪಕವಾಗಿ ‘ಷೇರ್’ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶ ವಿರೋಧಿ ಕೆಲಸಗಳಿಗೆ ಪ್ರಚೋದನೆ ನೀಡುವ ಬರಹಗಳನ್ನು ಹಾಕಿದರೂ ಟ್ವಿಟರ್ ಅವುಗಳ ಕುರಿತು ನಿಗಾ ವಹಿಸಿಲ್ಲ. ದೇಶ ವಿರೋಧಿ ಹೇಳಿಕೆಗಳ ಟ್ವೀಟ್ಗಳನ್ನು ಪ್ರಕಟಿಸಲು ಸಂಸ್ಥೆ ಉತ್ಸುಕವಾಗಿದೆ. ಹಾಗಾಗಿ ಸಂಸ್ಥೆಯ ಹಾಗೂ ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.