ಅಂಕೋಲಾ: ತೀವ್ರ ಕುತೂಹಲ ಮೂಡಿಸಿದ್ದ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮತ್ತು ಉಪಾಧ್ಯಕ್ಷರಾಗಿ ವೆಂಕಟ್ರಾಯ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರಾದ ಪ್ರೀತಂ ವಂದಿಗೆ, ಬಾಬು ಸುಂಕೇರಿ, ಗೋಪು ಹಿಚ್ಕಡ, ನರಸಿಂಹ ಭಾಗ್ವತ, ದೇವಾನಂದ ಆಂದ್ಲೆ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಪ್ರದೀಪ ನಾಯಕ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ನಡೆದ ತಾಲ್ಲೂಕು ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ, ಸೊಸೈಟಿಗಳಿಂದ ಆಯ್ಕೆಯಾಗುವ ಒಟ್ಟು 13 ಸ್ಥಾನಗಳಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೆಲುಗೈ ಸಾಧಿಸಿದ್ದರು.
ಗೋಪಾಲಕೃಷ್ಣ ನಾಯಕ ಮಾತನಾಡಿ, ‘ನನ್ನನ್ನು ಆಯ್ಕೆ ಮಾಡಲು ಕಾರಣೀಕರ್ತರಾದ ಸಂಘದ ಎಲ್ಲ ನಿರ್ದೇಶಕರಿಗೂ ಹಾಗೂ ಪ್ರತ್ಯಕ್ಷವಾಗಿ– ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳು. ಶಾಸಕರಾದ ಸತೀಶ ಸೈಲ್ ನೆರವಿನೊಂದಿಗೆ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಹಕಾರದಲ್ಲಿ, ಹಿರಿಯರಾದ ಆರ್.ವಿ. ದೇಶಪಾಂಡೆಯವರ ಮಾರ್ಗದರ್ಶನ ಪಡೆದು ಇನ್ನೂ ಉತ್ತಮ ರೀತಿಯಲ್ಲಿ ಈ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ದು, ಜಿಲ್ಲೆಯಲ್ಲಿಯೇ ಮಾದರಿ ಸಂಘವನ್ನಾಗಿ ರೂಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.
ಚುನಾವಣಾಧಿಕಾರಿಯಾಗಿ ಮಮತಾ ನಾಯ್ಕ ಕಾರ್ಯನಿರ್ವಹಿಸಿದರು. ಜಗದೀಶ ನಾಯಕ, ಹೊಸಬಣ್ಣ ನಾಯಕ, ಗುಂಡು ಬೇಲೆಕೇರಿ, ರವಿ ಜೋಗಿ ಭಾವಿಕೇರಿ, ಸೂರಜ್ ವಂದಿಗೆ, ರಾಘು ಹಿಚ್ಕಡ, ಬಾಬು ಭಾವಿಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.