ADVERTISEMENT

ಶಿರಸಿ: ಲೀಸ್ ಮುಗಿದ ಜಾಗ ವಸತಿ ರಹಿತರಿಗೆ ಕೊಡಿ

ನಗರಸಭೆ ಸಾಮಾನ್ಯಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:13 IST
Last Updated 29 ಸೆಪ್ಟೆಂಬರ್ 2022, 13:13 IST
ನಗರೋತ್ಥಾನ ಯೋಜನೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಶಿರಸಿ ನಗರಸಭೆ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು
ನಗರೋತ್ಥಾನ ಯೋಜನೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಶಿರಸಿ ನಗರಸಭೆ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು   

ಶಿರಸಿ: ನಗರಸಭೆಯಿಂದ ಲೀಸ್ ಆಧಾರದಲ್ಲಿ ನೀಡಲಾದ ಜಾಗವನ್ನು ಬಳಕೆದಾರರಿಂದ ಪಡೆದು ನಗರದಲ್ಲಿರುವ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಹಲವು ನಗರಸಭೆ ಸದಸ್ಯರಿಂದ ವ್ಯಕ್ತವಾಯಿತು.

ಇಲ್ಲಿನ ಅಟಲ್ ಸಭಾಂಗಣದಲ್ಲಿ ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗರಾಜ ನಾಯ್ಕ, ‘ಲೀಸ್ ಅವಧಿ ಮುಗಿದ ಜಾಗವನ್ನು ಲೀಸ್ ದಾರರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವಧಿ ಮುಗಿದ ಜಾಗವನ್ನು ಲೀಸ್‍ದಾರರಿಂದ ಹಿಂಪಡೆದು ನಿವೇಶನ ರಹಿತರಿಗೆ ಮನೆ ನಿರ್ಮಾಣಕ್ಕೆ ನೀಡಲು ಕ್ರಮವಾಗಲಿ’ ಎಂದರು.

‘ನಿವೇಶನ ರಹಿತ ಕುಟುಂಬಕ್ಕೆ ವಸತಿ ಯೋಜನೆ ಮನೆ ನಿರ್ಮಾಣಕ್ಕೆ ಹನುಮಂತಿಯಲ್ಲಿ ಜಾಗ ನೋಡಲಾಗಿತ್ತು. ಅದು ನಗರದಿಂದ ದೂರವಿದೆ ಎಂದು ಕೈಬಿಡಲಾಗಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಹೇಳಿದರು.

ADVERTISEMENT

‘ಚಿಪಗಿಯಲ್ಲಿ ಈ ಹಿಂದೆ ನೋಡಿದ ಎರಡು ಎಕರೆ ಜಾಗವಿದೆ. ಅದನ್ನೇ ಪ್ರಯತ್ನಪಟ್ಟು ಪಡೆದು ನಿವೇಶನ ರಹಿತರಿಗೆ ಜಿ ಪ್ಲಸ್ ಮಾದರಿಯ ಕಟ್ಟಡ ನಿರ್ಮಿಸಿಕೊಡಬಹುದು’ ಎಂದು ಸದಸ್ಯ ಪ್ರದೀಪ ಶೆಟ್ಟಿ ಸಲಹೆ ನೀಡಿದರು.

‘ನಗರ ಮಹಾಯೋಜನೆ ಸಿದ್ಧಪಡಿಸಲು ತಯಾರಿ ನಡೆದು ಎಂಟು ವರ್ಷ ಕಳೆದಿದೆ. ಇನ್ನೂ ಜಾರಿಗೆ ತರಲಾಗಿಲ್ಲದಿರುವುದು ದುರಂತ’ ಎಂದು ಪ್ರದೀಪ ಶೆಟ್ಟಿ ಹೇಳಿದರು.

‘ಅರಣ್ಯ ಇಲಾಖೆಯಿಂದ ಅತಿಸೂಕ್ಷ್ಮ ವಲಯ ಇರುವ ಕುರಿತು ಮಾಹಿತಿ ಈಚೆಗೆ ಸಲ್ಲಿಕೆಯಾಗಿದೆ. ಈಗ ಯೋಜನೆ ನಕ್ಷೆ ಸಿದ್ದಪಡಿಸಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಸಭೆಯ ಬಳಿಕ ನಿರ್ಣಯವಾಗಲಿದೆ’ ಎಂದು ಪೌರಾಯುಕ್ತರು ಹೇಳಿದರು.

‘ನಿಯಮಬಾಹಿರವಾಗಿ ನಿರ್ಮಿಸಲಾದ ಕಟ್ಟಡಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಮಧುಕರ ಬಿಲ್ಲವ, ನಾಗರಾಜ ನಾಯ್ಕ, ರಾಘವೇಂದ್ರ ಶೆಟ್ಟಿ ಆಗ್ರಹಿಸಿದರು.

‘ಪಾರ್ಕಿಂಗ್ ಸೌಲಭ್ಯ ಇಲ್ಲದ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ. ನಿಯಮಕ್ಕೆ ವಿರುದ್ಧವಾಗಿದ್ದರೆ ಕ್ರಮ ಜರುಹಿಸುತ್ತೇವೆ’ ಎಂದು ಪೌರಾಯುಕ್ತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.