ADVERTISEMENT

ಗೋಡೆಗೆ ಚಿತ್ತಾಕರ್ಷಕ ಚಿತ್ರಗಳ ಅಲಂಕಾರ

‘ಬೆಟರ್ ಕಾರವಾರ’ ತಂಡದ ಸದಸ್ಯರಿಂದ ಚಿತ್ರಗಳ ರಚನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 14:18 IST
Last Updated 25 ಡಿಸೆಂಬರ್ 2020, 14:18 IST
‘ಬೆಟರ್ ಕಾರವಾರ’ ತಂಡದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆಯ ಮೇಲೆ ಬರೆದಿರುವ ಆಕರ್ಷಕ ಚಿತ್ರಗಳು
‘ಬೆಟರ್ ಕಾರವಾರ’ ತಂಡದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆಯ ಮೇಲೆ ಬರೆದಿರುವ ಆಕರ್ಷಕ ಚಿತ್ರಗಳು   

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆಗಳೀಗ ಕಲೆಯ ಪ್ರತಿಫಲನದಂತಾಗಿದೆ. ‘ಬೆಟರ್ ಕಾರವಾರ’ ಎಂಬ ಸಂಘಟನೆಯ 30ಕ್ಕೂ ಅಧಿಕ ಯುವಕರು ಬರೆದಿರುವ ಆಕರ್ಷಕ ಚಿತ್ರಗಳು ಇದಕ್ಕೆ ಕಾರಣ.

ಮಳೆಗಾಲದಲ್ಲಿ ಪಾಚಿ ಹಿಡಿದು ಬಣ್ಣ ಕಳೆದುಕೊಂಡಿ ಗೋಡೆಗಳೀಗ ಸುಂದರವಾಗಿ ಕಂಗೊಳಿಸುತ್ತಿವೆ. ಯಕ್ಷಗಾನ, ಪರಿಸರ ಸಂರಕ್ಷಣೆ ಸೇರಿದಂತೆ ಸುಮಾರು 40 ಕಲಾಕೃತಿಗಳು ಇಲ್ಲಿ ರಚನೆಯಾಗಿವೆ. ತಂಡದ ಕೆಲವು ಸದಸ್ಯರು ಕೊರೊನಾ ಕಾರಣದಿಂದ ಜಾರಿಯಾಗಿರುವ ‘ವರ್ಕ್ ಫ್ರಂ ಹೋಂ’ನಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾರ್ಥಿಗಳು, ವಿವಿಧ ವೃತ್ತಿಪರರೂ ಕೈಜೋಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಆರಂಭವಾದ ‘ಬೆಟರ್ ಕಾರವಾರ’ ಸಂಘಟನೆಯು, ಈಗ ನೂರಾರು ಜನರನ್ನು ಆಕರ್ಷಿಸುತ್ತಿದೆ. ಸ್ಥಳೀಯರಾದ, ಬೇರೆ ಬೇರೆ ನಗರಗಳಲ್ಲಿ ವೃತ್ತಿ ನಿರತರಾಗಿರುವ ಪ್ರೀತೇಶ ರಾಣೆ, ಸತೀಶ ಮಾಳ್ಸೇಕರ್, ನಿತೇಶ ನಾಯ್ಕ, ಸೂರಜ್ ಗೋವೇಕರ್, ಅಮನ್ ಶೇಖ್, ಪ್ರಸಾದ ಸಾದಿಯೆ, ಉಮಾ ಶಂಕರ ಈ ತಂಡವನ್ನು ಆರಂಭಿಸಿದ್ದರು. ಸದ್ಯ ಸದಸ್ಯರ ಸಂಖ್ಯೆ 40ಕ್ಕೇರಿದೆ.

ADVERTISEMENT

‘ಸುಂದರವಾದ ಕಾರವಾರವನ್ನು ಮತ್ತಷ್ಟು ಜನರಿಗೆ ಪರಿಚಯಿಸಬೇಕು. ವಿವಿಧ ಕಡೆ, ವಿವಿಧ ಕೆಲಸಗಳಲ್ಲಿ ತೊಡಗಿರುವ ಸಮಾನ ಮನಸ್ಕರು ಈ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿ ನಾಟಕಗಳ ಮೂಲಕವೂ ಜಾಗೃತಿ ಮೂಡಿಸಲು ಚಿಂತಿಸಲಾಗಿದೆ’ ಎನ್ನುತ್ತಾರೆ ತಂಡದ ಸದಸ್ಯ ನಿತೇಶ ನಾಯ್ಕ.

ಕಾರವಾರದ ಬಗ್ಗೆ ಉತ್ತಮ ಅಭಿಪ್ರಾಯ, ಜನರ ಪ್ರೀತಿ ಮೂಡುವ ರೀತಿಯಲ್ಲಿ ಕೆಲಸ ಮಾಡುತ್ತಿರುವ ತಂಡವು, ಈ ಹಿಂದೆ ಅ.2ರಿಂದ ಪ್ರತಿ ಭಾನುವಾರ ವಿವಿಧೆಡೆ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದ್ದರು. 15 ವಾರ ಈ ಕಾರ್ಯದಲ್ಲಿ ತೊಡಗಿದ್ದರು. ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯ ಗೋಡೆಯ ಮೇಲೆ ರೆಕ್ಕೆಗಳ ಚಿತ್ರವನ್ನೂ ತಂಡದ ಸದಸ್ಯರು ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.