ಶಿರಸಿ: ಸ್ವಾರ್ಥಕ್ಕಾಗಿ ಬಿಜೆಪಿ ಸೇರಿ ಉಪಚುನಾವಣೆಗೆ ಕಾರಣರಾಗಿರುವ ಶಿವರಾಮ ಹೆಬ್ಬಾರ್ ಅವರಿಗೆ ಮತದಾರರು ಪಾಠ ಕಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೀಪಕ ದೊಡ್ಡೂರು ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಬ್ಬಾರ್ ಅವರಿಗೆ ಪಕ್ಷ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನೂ ನೀಡಿತ್ತು. ಆದರೆ, ಅವರು ಮತದಾರರು, ಪಕ್ಷಕ್ಕೆ ದ್ರೋಹವೆಸಗಿ, ಚುನಾವಣೆ ನಡೆಯಲು ಕಾರಣರಾಗಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ’ ಎಂದರು.
‘ಬಿಜೆಪಿ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ ಎಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಶಾಸಕ ಸ್ಥಾನದಿಂದ ಅನರ್ಹಗೊಂಡವರಿಗೆ ಟಿಕೆಟ್ ನೀಡಿರುವುದು ಅಧಿಕಾರದ ಆಸೆಯಲ್ಲದೇ ಬೇರೇನು ಆಗಲು ಸಾಧ್ಯ ? ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ’ ಎಂದು ಹೇಳಿದರು.
‘ಹಿರಿಯ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡುವುದನ್ನು ಬಿಟ್ಟು ಅಭಿವೃದ್ಧಿಗೆ ಪೂರಕವಾದ ರಾಜಕಾರಣ ಮಾಡಲಿ. ನಾಲಿಗೆಯ ಮೇಲೆ ಹಿಡಿತವಿಲ್ಲದ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ಹೋಗಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಬಿಜೆಪಿ ಕೈಬಿಟ್ಟಿದೆ. ಬಿಜೆಪಿಯಲ್ಲೇ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಅವರನ್ನು ನೋಡಿದರೆ, ಕಾಂಗ್ರೆಸ್ ಕಡೆಗೆ ಅವರೇ ಬರುವಂತೆ ಕಾಣುತ್ತಿದೆ’ ಎಂದು ದೇಶಪಾಂಡೆ ಬಿಜೆಪಿಗೆ ಬರಬಹುದೆಂದು ಅನಂತಕುಮಾರ್ ಪರೋಕ್ಷವಾಗಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ಪಕ್ಷದ ಪ್ರಮುಖರಾದ ಅಬ್ಬಾಸ್ ತೋನ್ಸೆ, ಜಗದೀಶ ಗೌಡ, ಗಾಯತ್ರಿ ನೇತ್ರೇಕರ, ಬಸವರಾಜ ದೊಡ್ಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.