ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯದಿಂದ ಬೆಳಿಗ್ಗೆ 11ರ ಮಾಹಿತಿಯಂತೆ 10 ಗೇಟ್ಗಳನ್ನು ತೆರೆಯಲಾಗಿದೆ. ಅವುಗಳ ಮೂಲಕ ಕಾಳಿ ನದಿಗೆ 1.64 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ವಿದ್ಯುತ್ ಉತ್ಪಾದಿಸಿ16,848 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ 1.68 ಲಕ್ಷ ಒಳಹರಿವು ದಾಖಲಾಗಿದೆ.
ಒಟ್ಟು 1.81 ಲಕ್ಷ ಕ್ಯುಸೆಕ್ ನೀರು ನದಿಗೆ ಸೇರುತ್ತಿದ್ದು, ಸಮೀಪದ ಮಲ್ಲಾಪುರ, ಕುರ್ನಿಪೇಟೆ, ಕದ್ರಾ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಭಾರತೀಯ ನೌಕಾದಳವೂ ಕೈ ಜೋಡಿಸಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮನವಿಯ ಮೇರೆಗೆ ರಕ್ಷಣಾ ತಂಡವನ್ನು ಮಲ್ಲಾಪುರಕ್ಕೆ ಕಳುಹಿಸಿಕೊಟ್ಟಿದೆ.
ಕಾರವಾರದ ಭಾರತೀಯ ನೌಕಾಪಡೆಯ ತುರ್ತು ಸ್ಪಂದನ ತಂಡದ (ಇ.ಆರ್.ಟಿ) ಸದಸ್ಯರು ತಂಡದಲ್ಲಿದ್ದಾರೆ. 16 ಮಂದಿ ಮುಳುಗು ತಜ್ಞರು, ನಾಲ್ವರು ನಾವಿಕರು, ಜೀವರಕ್ಷಕ ಜಾಕೆಟ್ಗಳು, ಹಗ್ಗ ಮುಂತಾದ ಸಲಕರಣೆಗಳನ್ನು ತಂಡದವರು ಹೊಂದಿದ್ದಾರೆ. ಕದ್ರಾ ಜಲಾಶಯದ ಬಳಿ, ಮಲ್ಲಾಪುರ, ಕುರ್ನಿಪೇಟೆ ಹಾಗೂ ಕೈಗಾ ಸುತ್ತಮುತ್ತ ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ನೌಕಾದಳದ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾಪ್ಟನ್ ಅಜಯ್ ಕಪೂರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.