ಶಿರಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಸಮುದಾಯದ ಅಭಿವೃದ್ಧಿಗೆ ಶಾಲಾ ಶಿಕ್ಷಕರ ಒದಗಣೆ, ಬೆಂಚು, ಡೆಸ್ಕ್ ಪೂರೈಕೆ ಶಾಲಾ ಮೂಲಸೌಕರ್ಯ ಅಭಿವೃದ್ಧಿ ಕೆರೆಗಳ ಅಭಿವೃದ್ಧಿ ಸುಜ್ಞಾನ ನಿಧಿ ಶಿಷ್ಯವೇತನ ಶುದ್ಧಗಂಗಾ, ವಾತ್ಸಲ್ಯ, ಮಾಸಾಶನದಂತಹ ಅನೇಕ ಕಾರ್ಯಕ್ರಮಗಳ ಮೂಲಕ ವಾರ್ಷಿಕ ₹630 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ ಎಂ. ತಿಳಿಸಿದರು.
ಶಿರಸಿ ಯೋಜನಾ ಕಚೇರಿಯಲ್ಲಿ ಶನಿವಾರ ನಡೆದ ಪ್ರಸಕ್ತ ವರ್ಷದ ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಜಿಲ್ಲೆಯಲ್ಲಿ 54 ಏಕೋಪಾಧ್ಯಾಯ ಶಿಕ್ಷಕರಿರುವ ಗ್ರಾಮೀಣ ಶಾಲೆಗಳಿಗೆ ಅತಿಥಿ ಶಿಕ್ಷಕರ ಒದಗಿಸುವ ಮೂಲಕ ಪ್ರಾಥಮಿಕ ಶಿಕ್ಷಣದಲ್ಲಿನ ಕೊರಗು ನಿವಾರಣೆಗೆ ಗಮನ ನೀಡಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಡಿ.ಆರ್.ನಾಯ್ಕ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳ ಯೋಜನೆ ಮೂಲಕ ವೀರೇಂದ್ರ ಹೆಗ್ಗಡೆ ಅವರು ಬಹು ದಿನಗಳಿಂದ ವಿವಿಧ ಸೌಲಭ್ಯ ಒದಗಿಸಿ ಪ್ರೋತ್ಸಾಹಿತ್ತಿದ್ದಾರೆ. ಶಿಕ್ಷಣದ ಮೂಲಕ ಸಮಾಜ ಮತ್ತು ಕುಟುಂಬಗಳ ಶಾಶ್ವತ ಅಭಿವೃದ್ಧಿಯಾಗಬೇಕೆಂಬ ಅವರ ದೂರದೃಷ್ಟಿ ಮತ್ತು ನೈಜ ಕಾಳಜಿ ತೋರಿಸುತ್ತದೆ’ ಎಂದು ತಿಳಿಸಿದರು.
ಶಿರಸಿ ಬಿಇಒ ನಾಗರಾಜ ನಾಯ್ಕ ಮಾತನಾಡಿ, ಅತಿಥಿ ಶಿಕ್ಷಕರು ಯಾವುದೇ ಕೀಳರಿಮೆ ಹೊಂದದೆ ನಮ್ಮಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವಂತ ಶ್ರೇಷ್ಠ ಅವಕಾಶ ಬೆಳೆಸಿಕೊಂಡು ಮಕ್ಕಳ ಜ್ಞಾನವೃದ್ಧಿಗೆ ಮತ್ತು ಇಲಾಖೆ ಹಾಗೂ ಸಂಸ್ಥೆಯ ಆಶಯಗಳನ್ನು ಪೂರ್ಣ ಮಾಡಬೇಕೆಂದು ತಿಳಿಸಿದರು.
ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಗೌರಿ ನಾಯಕ, ಜಿಲ್ಲಾ ಯೋಜನಾಧಿಕಾರಿ ಶುಕ್ರು ಗೌಡ, ಶಿರಸಿ ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ಸಿದ್ದಾಪುರ ಯೋಜನಾಧಿಕಾರಿ ಗಿರೀಶ, ಯಲ್ಲಾಪುರ ಯೋಜನಾಧಿಕಾರಿ ಸಂತೋಷ, ಶಿಕ್ಷಣ ಇಲಾಖೆ ಸತೀಶ ಹಾಜರಿದ್ದರು.
ಈ ಸಂದರ್ಭದಲ್ಲಿ ಮೂರು ತಾಲ್ಲೂಕುಗಳ ಶಿಕ್ಷಕರಿಗೆ ಆಯ್ಕೆ ಪತ್ರ ವಿತರಣೆ ಮಾಡಲಾಯಿತು.
ಮಕ್ಕಳು ಶಿಕ್ಷಣದ ಕಲಿಕೆಯ ಸಮಯದಲ್ಲಿ ಅವಕಾಶದಿಂದ ವಂಚಿತರಾಗದಂತೆ ಸರ್ಕಾರದ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರಕವಾಗಿ ಶಿಕ್ಷಕರನ್ನು ಒದಗಿಸುತ್ತಿರುವುದು ವರದಾನಗೌರಿ ನಾಯಕ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.