ADVERTISEMENT

ಶಿರಸಿ | ನಾಗರ ಕಚ್ಚಿದ್ದ ನಾಯಿಗೆ ಪುನರ್ಜನ್ಮ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:03 IST
Last Updated 22 ಮೇ 2020, 15:03 IST
ಹಾವು ಕಚ್ಚಿಸಿಕೊಂಡು ಗುಣಮುಖವಾಗಿರುವ ಡಾಬರ್‌ಮನ್ ನಾಯಿ
ಹಾವು ಕಚ್ಚಿಸಿಕೊಂಡು ಗುಣಮುಖವಾಗಿರುವ ಡಾಬರ್‌ಮನ್ ನಾಯಿ   

ಶಿರಸಿ: ನಾಗರ ಹಾವಿನೊಂದಿಗೆ ಸೆಣೆಸಾಡಿ, ಸಾವಿನ ಮನೆ ಹೊಕ್ಕಿದ್ದ ಡಾಬರ್‌ಮನ್‌ ನಾಯಿಯೊಂದು ಪಶುವೈದ್ಯರ ಆರೈಕೆಯಲ್ಲಿ ಮರುಜನ್ಮ ಪಡೆದಿದೆ.

ಹಾನಗಲ್‌ನ ಗದುಗೆಪ್ಪ ಪಾಟೀಲ್ ಅವರ ಮನೆಯ ಅಂಗಳಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ನಾಗರ ಹಾವನ್ನು ಕಂಡ ಎಂಟು ವರ್ಷದ ಡಾಬರ್‌ಮನ್ ನಾಯಿ ಹಾವಿನ ಮೇಲೆರಗಿತ್ತು. ನಾಯಿ ಮತ್ತು ಹಾವಿನ ಸೆಣೆಸಾಟದಲ್ಲಿ ಹಾವು ನಾಯಿಯನ್ನು ಕಚ್ಚಿತ್ತು, ನಂತರ ನಾಯಿ ಹಾವನ್ನು ತುಂಡರಿಸಿತ್ತು. ‘ವಿಷದ ಹಾವು ಕಚ್ಚಿದ ಕಾರಣ ನಾಯಿಯ ದೇಹದಲ್ಲಿ ನಂಜು ಏರಿತ್ತು. ಹಾವು ಕಚ್ಚಿ 12 ಗಂಟೆಯ ನಂತರ ಮಾಲೀಕರು ಅದನ್ನು ಆಸ್ಪತ್ರೆಗೆ ತಂದಿದ್ದರು. ಕೋಮಾಕ್ಕೆ ಹೋಗಿದ್ದ ನಾಯಿಗೆ ಚಿಕಿತ್ಸೆ ನೀಡಲಾಯಿತು. ಸತತ ಎಂಟು ತಾಸು ಪ್ರಯತ್ನದ ನಂತರ ನಾಯಿ ಎಚ್ಚರಗೊಂಡಿದೆ. ಶುಕ್ರವಾರ ಬೆಳಿಗ್ಗೆ ನಾಯಿ ಸಂಪೂರ್ಣ ಗುಣಮುಖವಾಗಿದೆ. ಹಾವು ಕಚ್ಚಿದ ಜಾಗದಲ್ಲಿ ಬಾವು ಮಾತ್ರ ಇದೆ’ ಎಂದು ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ತಿಳಿಸಿದರು.

‘ಇದೇ ನಾಯಿ ಈ ಹಿಂದೆ ಏಳು ನಾಗರ ಹಾವುಗಳನ್ನು ಹಿಡಿದು ಸಾಯಿಸಿದೆ. ಈ ನಾಯಿಗೆ ಹಾವನ್ನು ಕಂಡರೆ ಆಗದು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.