ಕಾರವಾರ:ಶಾಲಾ ವಿದ್ಯಾರ್ಥಿಗಳು ಪ್ರವಾಸ ಬಂದಿದ್ದ ಬಸ್ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಬಳಿ ಶುಕ್ರವಾರ ರಾತ್ರಿ ಕಂದಕಕ್ಕೆ ಉರುಳಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. 10ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದಅನಂತಪುರ ಜಿಲ್ಲೆ ಕದಿರಿ ಪಟ್ಟಣದಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಬಸ್ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಬರಲಾಗಿತ್ತು. ಗೇರುಸೊಪ್ಪ ಬಳಿಯ ಸೂಳೆಮರ್ಕಿಯಲ್ಲಿ ಬಸ್ ಪಲ್ಟಿಯಾಯಿತು. ಅವಘಡದಲ್ಲಿ ವಿದ್ಯಾರ್ಥಿ ಟಿ.ಬಾಷಾ ಫಕ್ರುದ್ದೀನ್ (14) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಿಗಂದೂರು, ಜೋಗ, ಮುರ್ಡೇಶ್ವರ ಸೇರಿದಂತೆ ವಿವಿಧ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಲು ಬಂದಿದ್ದರು. ಬಸ್ನಲ್ಲಿ ಒಟ್ಟು 44 ವಿದ್ಯಾರ್ಥಿಗಳು, 9 ಶಿಕ್ಷಕರು, 4 ಅಡುಗೆ ಸಿಬ್ಬಂದಿ ಇದ್ದರು. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಮಣಿಪಾಲ, ಉಡುಪಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದವರಿಗೆ ಹೊನ್ನಾವರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ವಿವೇಕ ಶೇಣ್ವಿ, ಎ.ಎಸ್.ಪಿ ನಿಖಿತಾ ಬುಳ್ಳಾವರ, ಶಾಸಕ ದಿನಕರ ಶೆಟ್ಟಿ
ಭೇಟಿ ನೀಡಿ ಪರಿಶೀಲಿಸಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.