ಮುಂಡಗೋಡ: ‘ಹಿಂದಿನ ಸ್ಪೀಕರ್ ರಮೇಶಕುಮಾರ್ ಅವರ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರ ಕೆಡವಿದ್ದ 17 ಶಾಸಕರನ್ನು ಅನರ್ಹ ಎಂದಿದೆ. ಶಾಸಕರೊಬ್ಬರು ಅನರ್ಹ ಆಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಈ ಚುನಾವಣೆಯು ಜನರ ಹಿತಕ್ಕಾಗಿ ಅಲ್ಲ, ಶಾಸಕರಾಗಿದ್ದವರ ವೈಯಕ್ತಿಕ ಆಸೆಗಾಗಿ ನಡೆಯುತ್ತಿದೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ದೂರಿದರು.
ಶುಕ್ರವಾರ ಇಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ಮೇಲೆ ವಿಶ್ಚಾಸ ಇರುವ ಮತದಾರರು ಅನರ್ಹ ಶಾಸಕರಿಗೆ ಪಾಠ ಕಲಿಸಬೇಕು. ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿ, ಜನರು ಅತಂತ್ರರಾಗಿದ್ದಾರೆ. ಇಂತಹ ಸಮಯದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವುದು ಬಿಟ್ಟು, ಪಕ್ಷಕ್ಕೆ ಹಾಗೂ ಮತದಾರರಿಗೆ ಮೋಸ ಮಾಡಿ, ಅನರ್ಹ ಶಾಸಕರು ಮುಂಬೈಯಲ್ಲಿ ಕುಳಿತಿದ್ದರು’ ಎಂದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಲ್ಲಾಪುರ ಕ್ಷೇತ್ರಕ್ಕೆ ಕೇಳಿದ ಎಲ್ಲವನ್ನೂ ಕೊಟ್ಟರು. ಹಿಂದಿನ ಚುನಾವಣೆಯಲ್ಲಿ ಇಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಕರಪತ್ರ ಸಹ ಹಂಚಿದರು. ಆದರೆ ಈಗ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳುವುದನ್ನು ಪ್ರಜ್ಞಾವಂತ ಮತದಾರರು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ನಿಂದ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯವರಯ ಮತ ಕೇಳಲು ಬಂದಾಗ ಅವರ ತತ್ವ, ಸಿದ್ದಾಂತದ ಬಗ್ಗೆ ಮತದಾರರು ಕೇಳಬೇಕು. ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.