
ಜೊಯಿಡಾ: ತಾಲ್ಲೂಕಿನ ಗುಂದ ಭಾಗದಲ್ಲಿ ಒಂಟಿ ಸಲಗವೊಂದು ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು, ಜನವಸತಿ ಪ್ರದೇಶಗಳಲ್ಲೂ ಆನೆ ಸಂಚರಿಸುತ್ತಿದ್ದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚೆಗೆ ತಾಲ್ಲೂಕಿನ ನಗರಿಯಲ್ಲಿ ಆರ್.ಆರ್.ಭಟ್ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಮತ್ತು ಬಾಳೆ ಗಿಡಗಳನ್ನು ನಾಶ ಮಾಡಿದೆ. ಕೆಲವು ದಿನಗಳ ಹಿಂದೆ ತಾಲ್ಲೂಕಿನ ಅವುರ್ಲಿಯಲ್ಲಿ ರಾಜು ವೇಳಿಪ ಎಂಬುವರ ತೋಟದಲ್ಲಿ ಅಡಿಕೆ ಮತ್ತು ತೆಂಗಿನ ಮರಗಳನ್ನು ಹಾನಿಮಾಡಿದ್ದ ಈ ಒಂಟಿ ಸಲಗ ಎರಡು ದಿನಗಳ ಹಿಂದೆ ನಗರಿಯ ಪ್ರಭಾಕರ ದೇಸಾಯಿ ಎಂಬುವರ ಅಡಿಕೆ ತೋಟಕ್ಕೆ ಹಾನಿ ಮಾಡಿತ್ತು.
ಗಣೇಶಗುಡಿ ಭಾಗದಲ್ಲೂ ಹೆಣ್ಣಾನೆಯೊಂದು ಭತ್ತದ ಗದ್ದೆಗಳಿಗೆ ನುಗ್ಗಿ ಹಾನಿ ಮಾಡಿದ ಘಟನೆಗಳು ನಡೆದಿದ್ದವು. ತಾಲ್ಲೂಕಿನ ಗುಂದ ಜನ ಸಂಚಾರ ಮಾಡುವ ರಸ್ತೆಯಲ್ಲಿ ಆನೆ ಕಾಣಿಸಿಕೊಂಡಿದ್ದು, ಜನರು ಅಲ್ಲಿಂದ ಅದನ್ನು ಓಡಿಸಿದ್ದರು. ಆನೆ ನಾಶ ಮಾಡಿದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.