ADVERTISEMENT

ಶಿರಸಿ: ಜೆ.ಸಿ.ಬಿ. ಬಳಸಿ ಮನೆ ತೆರವು

ನಾರಾಯಣಗುರು ನಗರದಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 16:31 IST
Last Updated 18 ನವೆಂಬರ್ 2022, 16:31 IST
ಶಿರಸಿಯ ನಾರಾಯಣಗುರು ನಗರದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಲಾಯಿತು
ಶಿರಸಿಯ ನಾರಾಯಣಗುರು ನಗರದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಲಾಯಿತು   

ಶಿರಸಿ: ತಾಲ್ಲೂಕಿನ ನಾರಾಯಣಗುರು ನಗರದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಎರಡು ಮನೆಗಳನ್ನು ಶುಕ್ರವಾರ ಜೆ.ಸಿ.ಬಿ. ಬಳಸಿ ನೆಲಸಮಗೊಳಿಸಲಾಗಿದೆ.

ಸರ್ವೆ ನಂ.53ರಲ್ಲಿರುವ ಜಾಗದಲ್ಲಿ ಕಟ್ಟಲಾಗಿದ್ದ ಮನೆಗಳನ್ನು ತಹಶೀಲ್ದಾರ್ ಶ್ರೀಧರ ಮುಂದಲಮನಿ ಖುದ್ದು ನಿಂತು ತೆರವುಗೊಳಿಸಿದರು. ತೆರವುಗೊಂಡ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು.

ಮನೆ ಕಟ್ಟಿಕೊಂಡಿದ್ದ ಸೀತಾ, ರಾಜು ಎಂಬುವವರು, ‘ತಮಗೆ ನೊಟೀಸ್ ನೀಡದೆ ಮನೆ ತೆರವುಗೊಳಿಸಿದ್ದಾರೆ. 1996 ರಿಂದಲೂ ಇಲ್ಲಿ ಗುಡಿಸಲು ನಿರ್ಮಿಸಿ ವಾಸ ಮಾಡಲಾಗಿತ್ತು. ಮನೆ ಸಂಖ್ಯೆ, ಕರ ಪಾವತಿಸಿದ ದಾಖಲೆಗಳಿದ್ದರೂ ಏಕಾಏಕಿ ತೆರವು ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಕಳೆದ ಜೂನ್‍ನಲ್ಲಿ ಜಾಗ ಪರಿಶೀಲನೆ ನಡೆಸಿದ್ದ ವೇಳೆ ಇಲ್ಲಿ ವಾಸದ ಯಾವುದೇ ಕುರುಹು ಇರಲಿಲ್ಲ. ಗಿಡಗಂಟಿಗಳು ಬೆಳೆದಿದ್ದ ಜಾಗದಲ್ಲಿ ಈಚೆಗೆ ತಾತ್ಕಾಲಿಕ ಮನೆ ಕಟ್ಟಿಕೊಳ್ಳುವ ಯತ್ನ ನಡೆದಿದೆ. ಜಾಗದ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾಗಲೂ ಇಲ್ಲಿ ವಾಸವಿರುವ ಬಗ್ಗೆ ಯಾವುದೇ ದಾಖಲೆ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಹೊಸ ಅತಿಕ್ರಮಣ ತೆರವು ಮಾಡಲಾಗಿದೆ. ಮನೆ ನಿರ್ಮಾಣದ ಸಾಮಗ್ರಿಯನ್ನೂ ವಶಕ್ಕೆ ಪಡೆಯಲಾಗಿದ್ದು, ಜಾಗ ಅತಿಕ್ರಮಣ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಪ್ರತಿಕ್ರಿಯಿಸಿದ್ದಾರೆ.

‘ಹಳೆಯ ತಲೆಮಾರುಗಳಿಂದ ವಾಸವಿರುವ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಉಂಟಾಗುತ್ತಿಲ್ಲ. ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಲಾಗದು. ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಮಾರಟ ಮಾಡುವ ಮಧ್ಯವರ್ತಿಗಳ ಜಾಲ ಹೆಚ್ಚುತ್ತಿದ್ದು ಅಂತಹವರ ಕುರಿತು ಸಾರ್ವಜನಿಕರು ಎಚ್ಚರಿಕೆ ಹೊಂದಿರಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.