ಶಿರಸಿ: ‘ಯಕ್ಷಗಾನದ ವಿಶ್ವಕೋಶ ವಿಭಾಗ ಸ್ಥಾಪಿಸುವುದು ಮೊದಲ ಆದ್ಯತೆ’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ಅಕಾಡೆಮಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಗುರುವಾರ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ಕೃತಿಗಳಿರುವಬೃಹತ್ ಗ್ರಂಥಾಲಯ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯಿಂದ ಪ್ರಯತ್ನ ನಡೆಸಲಾಗುತ್ತದೆ’ ಎಂದರು.
‘ಯಕ್ಷಗಾನ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದ್ದರೆ ಮಾತ್ರ ಉಳಿಯುತ್ತದೆ. ಕಲೆ ನಂಬಿ ಜೀವನ ಸಾಗಿಸುವ ಕಲಾವಿದರಿಗೂ ಪ್ರೋತ್ಸಾಹ ಸಿಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.
‘ಬಡಗುತಿಟ್ಟಿನ ಕಲೆ ಎನಿಸಿರುವ ಯಕ್ಷಗಾನವನ್ನು ಬೆಂಗಳೂರಿನಂತಹ ಮಹಾನಗರಗಳ ಜನರಿಗೂ ಕಲಿಸಬೇಕಿದೆ. ಈ ಕಲೆಯ ವ್ಯಾಪ್ತಿ ವಿಸ್ತಾರಗೊಳಿಸಲು ಆದ್ಯತೆ ನೀಡಿ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.