ಶಿರಸಿ: ವಿಧಾನ ಪರಿಷತ್ ಸದಸ್ಯತ್ವದ 12 ವರ್ಷಗಳ ಅಧಿಕಾರಾವಧಿಯಲ್ಲಿ ಸ್ವಂತ ಟ್ರಸ್ಟ್ ಹೊರತುಪಡಿಸಿದರೆ ಮರಾಠಾ ಸಮುದಾಯಕ್ಕೆ ನಯಾಪೈಸೆ ಅನುದಾನ ನೀಡದೆ ಎಸ್.ಎಲ್.ಘೋಟ್ನೇಕರ್ ವಂಚಿಸಿದ್ದಾರೆಎಂದು ಕ್ಷತ್ರೀಯ ಮರಾಠ ಪರಿಷತ್ ರಾಜ್ಯ ಘಟಕದ ಉಪಾಧ್ಯಕ್ಷ ನಾಗೇಂದ್ರ ಜೀವೋಜಿ ಆರೋಪಿಸಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಾಠಾ ಸಮುದಾಯದ ಸಭಾಭವನಕ್ಕೆ ಸುಳ್ಳು ಮಾಹಿತಿ ನೀಡಿ ಅನುದಾನ ದುರ್ಬಳಕೆ ಮಾಡಿಕೊಂಡಿರುವದು ಸಾಬೀತಾಗಿರುವ ಕಾರಣಕ್ಕೆ ಲೋಕಾಯುಕ್ತ ನ್ಯಾಯಾಲಯ ಮೂರು ತಿಂಗಳೊಳಗೆ ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ಡಿ.6 ರಂದು ಸೂಚನೆ ನೀಡಿದೆ. ಈ ಬಗ್ಗೆ ದಾಖಲೆ ಇದ್ದರೂ ಘೋಟ್ನೇಕರ್ ಇಲ್ಲಸಲ್ಲದ ಹೇಳಿಕೆ ನೀಡಿ ಕಾನೂನಿಗೆ ಅಗೌರವ ತೋರಿದ್ದಾರೆ’ ಎಂದರು.
‘ಎಸ್.ಎಲ್.ಘೋಟ್ನೇಕರ ಹಳಿಯಾಳದಲ್ಲಿ ವಿವಿಧ ಸಂಘಟನೆ ಹುಟ್ಟುಹಾಕಿಕೊಂಡು ಅನುದಾನ ದುರುಪಯೋಗ ಪಡಿಸಿಕೊಂಡಿರುವದು ಸತ್ಯ. ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಅವರ ಯಾವ ಯತ್ನವೂ ಫಲಿಸುವುದಿಲ್ಲ’ ಎಂದರು.
‘ವ್ಯಾವಹಾರಿಕ ದ್ವೇಷದ ಕಾರಣಕ್ಕೆ ನನ್ನದೇ ಚೆಕ್ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿತ್ತು. ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಜಯಿಸಿದ್ದೆ. ತಮ್ಮ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ಘೊಟ್ನೇಕರ್ ವೃಥಾ ಆರೋಪದಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.
ದೇಮಾನಿ ಶಿರೋಜಿ, ಶಿವಾಜಿ ನರಸಾನಿ, ಮೋಹನ ಮಾವಳಂಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.