
ಅಂಕೋಲಾ: ‘ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ ಮುಂತಾದ ಮಾಧ್ಯಮಗಳ ಅತಿಯಾದ ಬಳಕೆಯಿಂದ ದೃಷ್ಟಿ ದೋಷ ಹೆಚ್ಚುತ್ತಿದ್ದು, ಅವುಗಳ ಬಳಕೆಯ ಬಗ್ಗೆ ಕಾಳಜಿ ವಹಿಸುವ ಜೊತೆಯಲ್ಲಿ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸಬೇಕು. ರಾಜ್ಕುಮಾರ್ ಅವರು ತಮ್ಮ ಕಣ್ಣನ್ನು ದಾನ ಮಾಡಿರುವುದರಿಂದ ಇಂದಿಗೂ ಅಜರಾಮರಾಗಿದ್ದಾರೆ. ಸಂಘಟನೆಗಳು ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ’ ಎಂದು ಡಾ.ಕರುಣಾಕರ್ ನಾಯ್ಕ ಹೇಳಿದರು.
ಪಟ್ಟಣದ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಒನ್ ಸೈಟ್ ಎಕ್ಸಿಲಾರ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಾಗೂ ಸಂಗಮ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಕಣ್ಣಿನ ಉಚಿತ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಇಟಗಿ, ‘ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾದದ್ದು ಅದರ ಜಾಗೃತಿ ಮೂಲಕ ಸಮಾಜದಲ್ಲಿ ಆರೋಗ್ಯದ ಸ್ವಾಸ್ಥ್ಯ ಕಾಪಾಡಬೇಕು. ಆ ಮೂಲಕ ಆರ್ಥಿಕ ಸಮಸ್ಯೆಯಿಂದ ಕಣ್ಣಿನ ಆರೈಕೆ ಮಾಡಲಾಗದ ಜನರಿಗೆ ಇಂತಹ ಉಚಿತ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ’ ಎಂದರು.
ಸ್ಪಂದನ ಸೇವಾ ಟ್ರಸ್ಟ್ನ ಖಜಾಂಚಿ ಪ್ರಕಾಶ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ.ವಿನಾಯಕ ಹೆಗಡೆ, ಕೌಟುಂಬಿಕ ಸಲಹಾ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ಭಟ್, ಹೊನಲು ನಾಯಕ, ಕರಿಯಮ್ಮ ಗೌಡರ್, ಮೋನಿಕಾ ಸಾಗರಕರ್, ಸ್ಮಿತಾ ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.