ಅಂಕೋಲಾ: ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನು ತಾಲ್ಲೂಕು ಬೆಳೆಗಾರರ ಸಮಿತಿಯಿಂದ ಸೋಮವಾರ ಸನ್ಮಾನಿಸಲಾಯಿತು. ಕರ ನಿರಾಕರಣೆ ಚಳವಳಿಯ ಪ್ರಥಮ ಸಭೆ ನಡೆದ ಕಳಸ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ತಾಲ್ಲೂಕಿನಲ್ಲಿ ಸುಮಾರು 430 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿದ್ದು, ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ನಿಧನರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಅನೇಕ ತೊಂದರೆಗಳನ್ನು ಅನುಭವಿಸಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲೆಯ ಹೋರಾಟಗಾರರ ಅನನ್ಯವಾದದ್ದು. ಕೆಲವರು ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ನಿಧನದ ನಂತರ ಅವರ ಕುಟುಂಬಸ್ಥರು ಅವಜ್ಞೆಗೆ ಒಳಗಾಗಿದ್ದಾರೆ ಎನ್ನುವ ಉದ್ದೇಶದಿಂದ ಬೆಳಗಾರರ ಸಮಿತಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಸ್ವಾತಂತ್ರ್ಯ ಹೋರಾಟಗಾರ ಸೂರ್ವೆಯ ವೆಂಕಣ್ಣ ಬೊಮ್ಮಯ್ಯ ನಾಯಕ ಅವರ ಮನೆಗೆ ತೆರಳಿ ಸಮಿತಿಯಿಂದ ಸನ್ಮಾನಿಸಲಾಯಿತು. ನಂತರ ಹಡವ ಗ್ರಾಮಕ್ಕೆ ತೆರಳಿ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಬೊಮ್ಮ ಜುಂಜಾ ಗೌಡ, ದಿ.ಪೊಕ್ಕ ತಿಮ್ಮಪ್ಪ ಗೌಡ, ದಿ.ಕರಿಯಾ ಹುಲಿಯಾ ಗೌಡ, ದಿ. ರಾಮ ಜುಂಜಾ ಗೌಡ, ದಿ.ಬೊಮ್ಮ ಕುಂಟಾ ಗೌಡ, ದಿ.ಗೋವಿಂದ ಜಂಗ ಗೌಡ, ದಿ.ಗೋವಿಂದ ಸುಬ್ಬಯ್ಯ ಗೌಡ, ದಿ. ಸೋಮು ಕುಚ್ಚಪ್ಪ ಗೌಡ ಅವರ ಕುಟುಂಬಗಳ ಸದಸ್ಯರನ್ನು ಸ್ಥಳೀಯ ದೇವಸ್ಥಾನ ಆವರಣದಲ್ಲಿ ಸನ್ಮಾನಿಸಲಾಯಿತು.
ಬೆಳೆಗಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ರಾಮಚಂದ್ರ ಹೆಗಡೆ, ಪ್ರಮುಖರಾದ ಜಗದೀಶ ನಾಯಕ, ರಾಜೇಶ ನಾಯಕ, ರಾಜೇಶ್ವರಿ ಕೇಣಿಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.