ADVERTISEMENT

ಕಿರಿಯ ಮಗ ಸಿಕ್ಕಿದ; ಹಾಗಿದ್ದರೆ ಇಷ್ಟು ಸಮಯ ಜೊತೆಗಿದ್ದವನು ಯಾರು!

ಅಂಕೋಲಾ: 30 ವರ್ಷಗಳ ಬಳಿಕ ತಂದೆಯ ಹುಡುಕಿ ಬಂದ ಪುತ್ರ ಹಾಗೂ ಪುತ್ರಿಯರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:27 IST
Last Updated 6 ಅಕ್ಟೋಬರ್ 2019, 15:27 IST
ಕಲಘಟಗಿಯಿಂದ ಬಂದ ಮಕ್ಕಳು ತಂದೆ ವೆಂಕಟ್ರಮಣ ನಾಯ್ಕ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.
ಕಲಘಟಗಿಯಿಂದ ಬಂದ ಮಕ್ಕಳು ತಂದೆ ವೆಂಕಟ್ರಮಣ ನಾಯ್ಕ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.   

ಅಂಕೋಲಾ: ಸುಮಾರು 30 ವರ್ಷ ದೂರವಾಗಿದ್ದ ಮಗ, ದಿಢೀರನೆ ಬಂದು ‘ನಾನು ನಿನ್ನ ಮಗನಪ್ಪಾ’ ಎಂದು ಹೇಳುತ್ತಾನೆ. ಇದರಿಂದ ತಂದೆಗೆ ಸಂಭ್ರಮದ ಬದಲು ಗೊಂದಲವಾಗುತ್ತದೆ. ತನ್ನ ಜೊತೆ13 ವರ್ಷಗಳಿಂದ ವಾಸ ಮಾಡುತ್ತಿರುವನು ಯಾರು ಎಂಬ ಪ್ರಶ್ನೆ ಚಿಂತೆಗೆ ದೂಡುತ್ತದೆ!

ಇಂತಹ ಅಪರೂಪದ ಪ್ರಹಸನವೊಂದು ತಾಲ್ಲೂಕಿನ ಕೇಣಿ ಗ್ರಾಮಲ್ಲಾಗಿದೆ.ಇಲ್ಲಿನವೆಂಕಟ್ರಮಣ ನಾಯ್ಕ (70) ಎಂಬುವವರು ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಜೊತೆ ಜೀವನ ನಡೆಸುತ್ತಿದ್ದರು. ಬಹಳ ಹಿಂದೆ ಕೌಟುಂಬಿಕ ಕಲಹದಿಂದ ಬೇಸತ್ತು ಶೋಭಾ, ಪತಿಯಿಂದ ದೂರವಾದರು. ತಮ್ಮ ಮೂವರುಮಕ್ಕಳೊಂದಿಗೆ ಕಲಘಟಗಿ ಸಮೀಪ ರಾಮನಾಳಕ್ಕೆ ತೆರಳಿ ಅಲ್ಲೇ ಜೀವನ ಕಳೆದರು. ಕೇಣಿಯಲ್ಲಿ ತಂದೆಯ ಜೊತೆ ಹಿರಿಯ ಮಗ ಸುರೇಶ ಮಾತ್ರ ಉಳಿದುಕೊಂಡರು.

ಇದಾಗಿ ಸುಮಾರು 17 ವರ್ಷಗಳ ಬಳಿಕ ಬಂದಯುವಕನೊಬ್ಬ,‘ನಾನು ನಿನ್ನ ಕಿರಿಯ ಮಗ ಮಂಜು’ ಎಂದು ಪರಿಚಯಿಸಿಕೊಂಡ. ಇಷ್ಟು ವರ್ಷಗಳ ಬಳಿಕ ಮಗ ಪುನಃ ಬಂದನಲ್ಲ ಎಂಬ ಖುಷಿಯಲ್ಲೇವೆಂಕಟ್ರಮಣ ಆತನನ್ನುಮನೆಗೆ ಸೇರಿಸಿಕೊಂಡರು.

ADVERTISEMENT

ಈ ನಡುವೆ ನಾಲ್ಕೈದು ದಿನಗಳ ಹಿಂದೆಕಲಘಟಗಿಯಿಂದ ಬಂದ ವ್ಯಕ್ತಿಯೊಬ್ಬರು, ‘ನಾನು ನಿಮ್ಮ ಕಿರಿಯ ಮಗ ಮಂಜು’ ಎಂದು ಪರಿಚಯಿಸಿಕೊಂಡರು. ಕೇಣಿಯ ಮನೆಯ ಸುತ್ತಮುತ್ತ ಈ ಹಿಂದೆ ಇದ್ದ ಪರಿಸರವನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದರು.ಇದು ವೆಂಕಟ್ರಮಣ ಅವರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿತು. ಅದಾದ ಬಳಿಕ ಆ ವ್ಯಕ್ತಿ ಕಲಘಟಗಿಗೆ ಮರಳಿದರು.

ತಮ್ಮ ಅಕ್ಕಂದಿರಾದ ನಾಗಮ್ಮ, ನೀಲಮ್ಮ ಹಾಗೂ ಅವರ ಸಂಸಾರವನ್ನು ಕರೆದುಕೊಂಡುಭಾನುವಾರ ಪುನಃ ಕೇಣಿಗೆ ಬಂದರು. ಆಗ ನೆರೆಹೊರೆಯವರು ಇವರ ಗುರುತು ಹಿಡಿದರು. ತಮ್ಮ ತಾಯಿಯ ಜೊತೆ ಹೋಗುವಾಗ ತೆಗೆದುಕೊಂಡು ಹೋಗಿದ್ದಹಳೆಯ ಮನೆಯ ದಾಖಲೆಗಳು, ಬ್ಯಾಂಕ್ ಪಾಸ್ ಪುಸ್ತಕ, ತಾಯಿಯ ಭಾವಚಿತ್ರವನ್ನೂತೋರಿಸಿದರು.‌

ಇವನ್ನೆಲ್ಲ ನೋಡುತ್ತಿದ್ದಂತೆ ವೆಂಕಟ್ರಮಣ ಆನಂದ ಬಾಷ್ಪ ಸುರಿಸಿದರು. ದಶಕಗಳ ಬಳಿಕ ಮಕ್ಕಳನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಇಡೀ ಕುಟುಂಬ ಮತ್ತೆ ಒಂದಾದ ಸಂಭ್ರಮದಲ್ಲಿ ಮುಳುಗಿತು.

ಹಾಗಿದ್ದರೆ, ಇಷ್ಟು ದಿನ ಜೊತೆಗಿದ್ದ ವ್ಯಕ್ತಿ ಯಾರು ಎಂಬಪ್ರಶ್ನೆಗೆಇನ್ನೂ ಉತ್ತರ ಸಿಕ್ಕಿಲ್ಲ. ಆವ್ಯಕ್ತಿ ಪ್ರತಿಕ್ರಿಯೆಗೆ ಸಿಗಲಿಲ್ಲ. ಅವರು ಮೀನುಗಾರಿಕೆಗೆ ತೆರಳಿದ್ದಾರೆ ಎಂಬ ಉತ್ತರ ಅಲ್ಲಿದ್ದವರಿಂದ ಬಂತು.

‘ಒಂದಾಗಿ ಬಾಳುತ್ತೇವೆ’:‌‘ತಾಯಿ ಇದ್ದಾಗ ಕೇಣಿಯಲ್ಲಿರುವ ನಮ್ಮ ತಂದೆ ಹಾಗೂ ಅಣ್ಣನ ಬಗ್ಗೆ ಹೇಳಿದ್ದಳು. ನಮಗೆ ತಿಳಿವಳಿಕೆ ಬಂದ ಬಳಿಕತಂದೆಯನ್ನು ನೋಡುವ ಹಂಬಲವಾಯಿತು. ಹಾಗಾಗಿ ಹುಡುಕುತ್ತ ಕೇಣಿಗೆ ಬಂದೆ. ಈಗ ನಾನು ಕಲಘಟಗಿಯಲ್ಲಿಮಂಜುಗಡ್ಡೆಯ ಕಾರ್ಖಾನೆ ಹೊಂದಿದ್ದು,ಸ್ಥಿತಿವಂತನಾಗಿದ್ದೇನೆ. ನನ್ನ ಅಪ್ಪ, ಅಣ್ಣನೊಂದಿಗೆ ಎಲ್ಲರೂ ಒಂದಾಗಿ ಬಾಳುತ್ತೇವೆ’ ಎಂದು ಮಂಜು ಹೇಳಿದರು.

‘ಅವನೂ ಸುಖವಾಗಿರಲಿ’: ‘ನನ್ನ ಮಕ್ಕಳೆಲ್ಲರೂ ಮತ್ತೆ ನನಗೆ ಸಿಕ್ಕಿರುವುದು ಸಂತಸವಾಗಿದೆ. ಆದರೆ, ಇಷ್ಟು ದಿನ ನನ್ನ ನೋಡಿಕೊಂಡು, ಮಂಜು ಎಂದು ಹೇಳಿಕೊಂಡಿದ್ದ ‘ಮಗ’ ಯಾರೆಂದು ತಿಳಿಯುತ್ತಿಲ್ಲ. ಅವನ ಪಾಡಿಗೆ ಅವನೂಸುಖವಾಗಿ ಬಾಳಲಿ’ ಎಂದುವೆಂಕಟ್ರಮಣ ನಾಯ್ಕ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.