ADVERTISEMENT

ಡಾ. ಕರ್ಕಿ, ಚಿತ್ತರಂಜನ್ ದೂರದರ್ಶಿತ್ವ ಬಿಜೆಪಿಗೆ ಮಾದರಿ: ಸಚಿವ ಶಿವರಾಮ ಹೆಬ್ಬಾರ

ಜಿಲ್ಲಾ ಘಟಕದ ಅಧ್ಯಕ್ಷರ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:39 IST
Last Updated 13 ಫೆಬ್ರುವರಿ 2020, 14:39 IST
13ಕೆಎಂಟಿ1ಇಪಿ : ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ವೆಂಟಕೇಶ ನಾಯಕ ಅವರಿಗೆ ಕುಮಟಾದಲ್ಲಿ ಪಕ್ಷದ ವತಿಯಿಂದ ಗುರುವಾರ ಅಭಿನಂದಿಸಲಾಯಿತು.
13ಕೆಎಂಟಿ1ಇಪಿ : ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ವೆಂಟಕೇಶ ನಾಯಕ ಅವರಿಗೆ ಕುಮಟಾದಲ್ಲಿ ಪಕ್ಷದ ವತಿಯಿಂದ ಗುರುವಾರ ಅಭಿನಂದಿಸಲಾಯಿತು.   

ಕುಮಟಾ: ‘ಬಹಳ ಕಷ್ಟದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅರಣ್ಯ ಅತಿಕ್ರಮಣ, ಇ-ಸ್ವತ್ತು ಮುಂತಾದ ಜ್ವಲಂತ ಸಮಸ್ಯೆಗಳಿಗೆ ನಿಶ್ಚಿತವಾಗಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತದೆ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ವೆಂಕಟೇಶ ನಾಯಕ ಅವರಿಗೆ ಪಕ್ಷದ ವತಿಯಿಂದ ಗುರುವಾರ ಇಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೋಲು ನಿಶ್ಚಿತವೆಂದು ಗೊತ್ತಿದ್ದರೂ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಿಕೊಂಡು ಪಕ್ಷ ಕಟ್ಟಿದ ಮಾಜಿ ಶಾಸಕ ಎಂ.ಪಿ.ಕರ್ಕಿ, ಅನಿರೀಕ್ಷಿತವಾಗಿ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೊಟ್ಟು, ಅವರನ್ನು ಸಂಸದರಾಗಿಸಿದ ದಿವಂಗತ ಡಾ. ಚಿತ್ತರಂಜನ್ ಅವರ ದೂರದರ್ಶಿತ್ವ ಪಕ್ಷದ ಸಂಘಟನೆಗೆ ಮಾದರಿ' ಎಂದರು.

ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ‘ಕಾಂಗ್ರೆಸ್ ಹಗಲು ದರೋಡೆ ಮಾಡಿದರೆ, ಈಗ ಕಾರವಾರದಲ್ಲಿ ಕೆಲವರು ಪ್ರತಿಭಟನೆ ಮಾಡಿ ಒಳಗೊಳಗೇ ಕಮಿಷನ್ ಹೊಡೆಯುತ್ತಿದ್ದಾರೆ' ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಪಕ್ಷದ ತಳಮಟ್ಟದ ಕಾರ್ಯಕರ್ತರ ಅಗತ್ಯಕ್ಕೆ ನಾಯಕರು ಗಂಭೀರ ಪ್ರಯತ್ನ ನಡೆಸಬೇಕು. ಪಕ್ಷಕ್ಕೆ ತ್ಯಾಗ ಮಾಡಿದ ವೆಂಕಟೇಶ ನಾಯಕರನ್ನು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಅರಸಿ ಬಂದಿದೆ. ಇ-ಸ್ವತ್ತು, ಅತಿಕ್ರಮಣ, ಆಧಾರ್ ತಿದ್ದುಪಡಿ ಮುಂತಾದ ಜನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಕಂಡುಕೊಳ್ಳಬೇಕಾಗಿದೆ' ಎಂದರು.

ADVERTISEMENT

ಅಭಿನಂದನೆ ಸ್ವೀಕರಿಸಿದ ವೆಂಕಟೇಶ ನಾಯಕ, ‘ಕಾರ್ಯಕರ್ತರು ಪಕ್ಷದ ಜನಪ್ರತಿನಿಧಿಗಳಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಹಾಗೂ ನಾಯಕರಲ್ಲಿ ಅಮಿತ್ ಶಾ ಅವರ ಸಂಘಟನಾ ಚತುರತೆಯನ್ನು ಹುಡುಕುತ್ತಿದ್ದಾರೆ’ ಎಂದರು. ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ವಿಧಾನ ಪರಿಷತ್ ಎಸ್.ವಿ. ಸಂಕನೂರ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾತನಾಡಿದರು. ವಿನೋದ ಪ್ರಭು, ಪ್ರಮೋದ ಹೆಗಡೆ, ಎಂ.ಜಿ. ನಾಯ್ಕ, ಮಾಜಿ ಶಾಸಕರಾದ ವಿವೇಕಾನಂದ ವೈದ್ಯ, ಸುನೀಲ ಹೆಗಡೆ, ಎಂ.ಪಿ. ಕರ್ಕಿ, ಗಂಗಾಧರ ಭಟ್ಟ ಇದ್ದರು. ಕೆ.ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.