ADVERTISEMENT

ತವರೂರಿಗೆ ತೆರಳಿದ ದೋಣಿ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:57 IST
Last Updated 27 ಏಪ್ರಿಲ್ 2021, 16:57 IST
ಕಾರವಾರದ ಬೈತಖೋಲ್‌ನಲ್ಲಿ ತಮಿಳುನಾಡಿನ ಕಾರ್ಮಿಕರು ಮಂಗಳವಾರ ದೋಣಿಗಳನ್ನು ಎಳೆದು ದಡಕ್ಕೆ ತಂದರು
ಕಾರವಾರದ ಬೈತಖೋಲ್‌ನಲ್ಲಿ ತಮಿಳುನಾಡಿನ ಕಾರ್ಮಿಕರು ಮಂಗಳವಾರ ದೋಣಿಗಳನ್ನು ಎಳೆದು ದಡಕ್ಕೆ ತಂದರು   

ಕಾರವಾರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 14 ದಿನಗಳ ಕರ್ಫ್ಯೂ ಜಾರಿ ಮಾಡಿದ ಕಾರಣ, ಮೀನುಗಾರಿಕಾ ದೋಣಿಗಳ ಕಾರ್ಮಿಕರು ಪುನಃ ತಮ್ಮ ರಾಜ್ಯಗಳತ್ತ ಪ್ರಯಾಣಿಸಿದ್ದಾರೆ.

ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ವಿವಿಧ ದೋಣಿಗಳಲ್ಲಿ ತಮಿಳುನಾಡಿನ ಅಂದಾಜು 50 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ದೋಣಿಗಳನ್ನು ಸಮುದ್ರದಿಂದ ಮೇಲೆ ತಂದು ದಡದಲ್ಲಿಟ್ಟು ತಮ್ಮ ಊರುಗಳಿಗೆ ಮರಳಿದ್ದಾರೆ.

ಜಿಲ್ಲೆಯ ವಿವಿಧ ಬಂದರುಗಳಲ್ಲಿ ಅದರಲ್ಲೂ ಕಾರವಾರ ಮತ್ತು ಭಟ್ಕಳದಲ್ಲಿ ಒಡಿಶಾ, ಪಶ್ಚಿಮ ಬಂಗಾಳದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ಹೋದವರಲ್ಲಿ ಹಲವರು ವಾಪಸ್ ಬಂದಿಲ್ಲ. ಬಂದವರಲ್ಲಿ ಹಲವರು ಈ ವರ್ಷ ಎರಡು ತಿಂಗಳಿನಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮದಿಂದಾಗಿ ಕೆಲಸವಿಲ್ಲದೇ ಜಿಲ್ಲೆಯನ್ನು ತೊರೆದಿದ್ದರು.

ADVERTISEMENT

ಗೋಕರ್ಣದಲ್ಲಿ ಯಾರೂ ಹೊರಗಿನ ಕಾರ್ಮಿಕರು ಇಲ್ಲ. ಸ್ವಲ್ಪ ಮಂದಿ ನೇಪಾಳದವರಿದ್ದಾರೆ. ಅವರು ಯಾರೂ ಹೋಗುವ ಸ್ಥಿತಿಯಲ್ಲಿಲ್ಲ. ಕುಮಟಾದಿಂದಲೂ ಕಾರ್ಮಿಕರು ತಮ್ಮೂರಿಗೆ ಈಗಾಗಲೇ ತೆರಳಿದ್ದಾರೆ.

ಹೊನ್ನಾವರದ ಬಂದರಿನಲ್ಲಿ ಸದ್ಯ ಒಡಿಶಾ, ಆಂಧ್ರಪ್ರದೇಶದ ಸುಮಾರು 20 ಕೆಲಸಗಾರರಿದ್ದಾರೆ. ನೆರೆಯ ತಾಲ್ಲೂಕುಗಳಿಂದ ಬರುತ್ತಿದ್ದ ಕಾರ್ಮಿಕರಿಗೆ ಕರ್ಫ್ಯೂ ಕಾರಣದಿಂದ ಕೆಲಸಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಹಮ್ಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.