ADVERTISEMENT

ಕಾರವಾರ | ಬಂದರಿನಲ್ಲಿ ಹೂಳು; ಮೀನುಗಾರರ ಗೋಳು

ವಾರದ ಅವಧಿಯಲ್ಲಿ ಮೂರು ಬೋಟ್ ಮುಳುಗಡೆ: ಸುಗಮ ಸಂಚಾರಕ್ಕೂ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 4:23 IST
Last Updated 18 ಅಕ್ಟೋಬರ್ 2025, 4:23 IST
ಕಾರವಾರ ತಾಲ್ಲೂಕಿನ ಮುದಗಾ ಮೀನುಗಾರಿಕೆ ಬಂದರಿನಲ್ಲಿ ಹೂಳಿನಲ್ಲಿ ಸಿಲುಕಿ ಮಗುಚಿದ್ದ ಪರ್ಸಿನ್ ದೋಣಿ
ಕಾರವಾರ ತಾಲ್ಲೂಕಿನ ಮುದಗಾ ಮೀನುಗಾರಿಕೆ ಬಂದರಿನಲ್ಲಿ ಹೂಳಿನಲ್ಲಿ ಸಿಲುಕಿ ಮಗುಚಿದ್ದ ಪರ್ಸಿನ್ ದೋಣಿ   

ಕಾರವಾರ: ಎರಡು ದಶಕ ಕಳೆದರೂ ಜಿಲ್ಲೆಯ ಮೀನುಗಾರಿಕೆ ಬಂದರುಗಳಲ್ಲಿ ತುಂಬಿದ ಹೂಳು ತೆರವುಗೊಳಿಸಿಲ್ಲ. ಇದರಿಂದ ದೋಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಜೊತೆಗೆ ಲಂಗರು ಹಾಕಿದ ದೋಣಿಗಳು ಹೂಳಿನಲ್ಲಿ ಸಿಲುಕಿ ಮುಳುಗುವ ಆತಂಕ ಎದುರಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಬೇಲೆಕೇರಿ, ಮುದಗಾ ಮೀನುಗಾರಿಕೆ ಬಂದರಿನಲ್ಲಿ ಮೂರು ಪರ್ಸಿನ್ ದೋಣಿಗಳು ಹೂಳಿನ ಪರಿಣಾಮವಾಗಿ ಮುಳುಗಿ, ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಎಂಟು ಮೀನುಗಾರಿಕೆ ಬಂದರುಗಳಿದ್ದು, ಅವುಗಳ ಪೈಕಿ ಕಾರವಾರದ ಬೈತಕೋಲ ಮೀನುಗಾರಿಕೆ ಬಂದರು ಮಾತ್ರ ಕಳೆದ ವರ್ಷ ಹೂಳೆತ್ತಲಾಗಿತ್ತು. ದೋಣಿಗಳ ಸಂಖ್ಯೆ ಹೆಚ್ಚಿರುವ ತದಡಿ, ಹೊನ್ನಾವರ ಬಂದರುಗಳಲ್ಲಿ ಹೂಳಿನ ಪರಿಣಾಮ ದೋಣಿಗಳು ಆಗಾಗ ಸಿಲುಕಿಕೊಳ್ಳುವ ಘಟನೆಗಳು ನಡೆಯುತ್ತಲೇ ಇವೆ. ಹೊನ್ನಾವರದ ಶರಾವತಿ ಅಳಿವೆಯಲ್ಲಿ ಪದೇ ಪದೇ ಪರ್ಸಿನ್ ದೋಣಿಗಳು ಸಿಲುಕುತ್ತಿವೆ.

‘ಮುದಗಾ ಬಂದರು ಸ್ಥಾಪನೆಯಾದಾಗಿನಿಂದ ಒಮ್ಮೆಯೂ ಹೂಳು ತೆಗೆಯುವ ಕೆಲಸ ನಡೆದಿಲ್ಲ. ಹಲವು ಬಾರಿ ಹೂಳು ತೆಗೆಯುವಂತೆ ಮನವಿ ಮಾಡಲಾಗಿತ್ತು. ಸಮುದ್ರ ಇಳಿತದ ಸಮಯದಲ್ಲಿ ದೋಣಿಗಳು ಹೂಳಿನಲ್ಲಿ ಸಿಲುಕಿಕೊಳ್ಳುತ್ತಿವೆ. ಅವುಗಳನ್ನು ಮೇಲಕ್ಕೆತ್ತಲು ಹರಸಾಹಸಪಡಬೇಕು. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈಚೆಗೆ ದೋಣಿ ಮುಳುಗಿದ್ದರಿಂದ ಲಕ್ಷಾಂತರ ಮೊತ್ತ ನಷ್ಟವಾಯಿತು’ ಎಂದು ದೋಣಿ ಮಾಲೀಕ ಮಾರುತಿ ಖಾರ್ವಿ ದೂರಿದರು.

‘ಮೀನುಗಾರಿಕೆ ಬಂದರುಗಳ ಹೂಳೆತ್ತುವಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಜಿಲ್ಲೆಯ ಬಹುತೇಕ ಮೀನುಗಾರಿಕೆ ಬಂದರುಗಳನ್ನು ಒಮ್ಮೆಯೂ ಹೂಳೆತ್ತಿಲ್ಲ’ ಎಂದು ಮೀನುಗಾರರು ದೂರಿದ್ದಾರೆ.

ಬೇಲೆಕೇರಿ ಮುದಗಾ ತದಡಿ ಬಂದರುಗಳಲ್ಲಿ ಹೂಳೆತ್ತಲು ₹12 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಸಿಆರ್‌ಝಡ್ ಅನುಮತಿಗೆ ಕಾಯಲಾಗುತ್ತಿದೆ
ರವಿಂದ್ರ ತಳೇಕರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.