ADVERTISEMENT

ನೆರೆ ಪೀಡಿತ ಐವರಿಗೆ ಸಿಗದ ‘ಹಕ್ಕು’

ಕಡವಾಡ ಗುಡ್ಡ ಕುಸಿತ ದುರಂತ; 10 ವರ್ಷ ಕಳೆದರೂ ಪಹಣಿ ಪತ್ರದಲ್ಲಿ ಆರು ಮಂದಿಯ ಹೆಸರಿಲ್ಲ

ದೇವರಾಜ ನಾಯ್ಕ
Published 19 ಆಗಸ್ಟ್ 2019, 19:31 IST
Last Updated 19 ಆಗಸ್ಟ್ 2019, 19:31 IST
ನೆರೆ ಸಂತ್ರಸ್ತರಿಗೆ ಕಾರವಾರ ತಾಲ್ಲೂಕಿನ ಮಾಡಿಬಾಗದಲ್ಲಿ ನೀಡಲಾಗಿರುವ ಮನೆಗಳು
ನೆರೆ ಸಂತ್ರಸ್ತರಿಗೆ ಕಾರವಾರ ತಾಲ್ಲೂಕಿನ ಮಾಡಿಬಾಗದಲ್ಲಿ ನೀಡಲಾಗಿರುವ ಮನೆಗಳು   

ಕಾರವಾರ:10 ವರ್ಷಗಳ ಹಿಂದೆ ತಾಲ್ಲೂಕಿನ ಕಡವಾಡದಲ್ಲಿಗುಡ್ಡ ಕುಸಿದು ನಿರಾಶ್ರಿತರಾದವರಿಗೆ ನೀಡಲಾದ 57ನಿವೇಶನಗಳ ಪೈಕಿ, ಆರು ಮಂದಿಗೆ ಈವರೆಗೂ ಪಹಣಿ ಪತ್ರ ನೀಡಿಲ್ಲ. ಐವರಿಗೆ ಇನ್ನೂಹಕ್ಕು ಪತ್ರಸಿಕ್ಕಿಲ್ಲ.

2009ರ ಅ.2ರಂದು ಒಂದೇ ಸಮನೆ ಸುರಿದ ಮಳೆಗೆ ಕಡವಾಡದ ಝರಿವಾಡ ಗುಡ್ಡ ಕುಸಿದು,19 ಮಂದಿ ಮೃತಪಟ್ಟಿದ್ದರು.ಈ ದುರಂತದಲ್ಲಿ 2,461 ಮಂದಿ ಸಂತ್ರಸ್ತರಾಗಿ, 21 ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.1,636 ಮನೆಗಳು ಹಾನಿಗೆ ಒಳಗಾಗಿದ್ದವು. ಅಂದು ಕೂಡ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಇದ್ದರು.

ಜಿಲ್ಲಾಧಿಕಾರಿ ಹೆಸರಲ್ಲಿ ಆರ್‌ಟಿಸಿ: ಪ್ರವಾಹ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಮನೆ ಕಳೆದುಕೊಂಡ ಗುಡ್ಡದಂಚಿನ ನಿವಾಸಿಗಳಿಗೆಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ತಾಲ್ಲೂಕಿನ ಮಾಡಿಬಾಗದಲ್ಲಿ ಸರ್ಕಾರಿ ಜಮೀನನ್ನು ನಿರಾಶ್ರಿತರಿಗೆ ನೀಡಲಾಗಿತ್ತು.ಆಸರೆ ಯೋಜನೆಯಡಿ ಸೇವಾ‌‌ ಭಾರತಿಸಂಸ್ಥೆಯು 50 ಮನೆಗಳನ್ನು ನಿರ್ಮಿಸಿಕೊಟ್ಟಿತ್ತು.

ADVERTISEMENT

ಈ ಪೈಕಿಅನಸೂಯಾ ಮಾಂಜ್ರೇಕರ್, ಸದಾನಂದ ಪಾಟೀಲ್, ಪವಿತ್ರಾ ತಳೇಕರ, ಸುನೀತಾ ಗೋವೇಕರ್, ಆಶೀರ್ವಾದ ಗೋವೇಕರ್, ನಾರಾಯಣ ಗೋವೇಕರ್ ಅವರಹೆಸರಿಗೆ ಈವರೆಗೂಪಹಣಿ ಪತ್ರ (ಆರ್‌ಟಿಸಿ) ಸಿಕ್ಕಿಲ್ಲ. ಜಿಲ್ಲಾಧಿಕಾರಿಯ ಹೆಸರಿನಲ್ಲೇ ದಾಖಲೆಗಳಿವೆ.

ಪಟ್ಟಾ ನೀಡಿಲ್ಲ, ಸೌಲಭ್ಯ ಇಲ್ಲ:ಲಕ್ಷೀಕಾಂತ ತಳೇಕರ, ರಮೇಶ ಮಾಂಜ್ರೇಕರ್, ಪ್ರೇಮಾ ತಳೇಕರ, ಪ್ರೇಮಾನಂದ‌ ಪಾಲೇಕರ್ ಹಾಗೂಕೃಷ್ಣ ನಾಯ್ಕ ಅವರಿಗೆ ಹಕ್ಕು (ಪಟ್ಟಾ) ಪತ್ರ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಂದಿಲ್ಲ ಎನ್ನುತ್ತಾರೆ ಹಕ್ಕು ಪತ್ರ ವಂಚಿತರು.

ನಿವೇಶನ ನೀಡುತ್ತಿರುವುದಾಗಿ ಗ್ರಾಮ ಪಂಚಾಯ್ತಿಯಿಂದ 2012ರಲ್ಲಿ ನೀಡಿದ ಪತ್ರವೊಂದನ್ನು ಬಿಟ್ಟರೆ ಬೇರಾವ ದಾಖಲೆಗಳು ಈಗ ಮನೆ ಮಾಲೀಕರ ಬಳಿ ಇಲ್ಲ. ಗ್ರಾಮ ಪಂಚಾಯ್ತಿಯಿಂದ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕವನ್ನು ಮಾನವೀಯತೆಯ ಮೇರೆಗೆ ನೀಡಲಾಗಿದೆ. ಆದರೆ, ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ಬೇಕಾದ ಮನೆ ಸಂಖ್ಯೆ ಇಲ್ಲದೇ ಸಂತ್ರಸ್ತರು ಪರದಾಡುವಂತಾಗಿದೆ.

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ!:ಸರ್ಕಾರದಿಂದ ನೀಡಲಾದ ಜಾಗದಲ್ಲಿ ಅಂಗನವಾಡಿ ಕೇಂದ್ರ ಹಾಗೂ ಅಂಚೆ ಕಚೇರಿಗೂ ಜಾಗ ಮೀಸಲಿಡಲಾಗಿದೆ. ಆದರೆ, 10 ವರ್ಷ ಸಂದರೂಕಟ್ಟಡ ನಿರ್ಮಾಣವಾಗಿಲ್ಲ. ಈವರೆಗೂ ಬಾಡಿಗೆ ಕಟ್ಟಡದಲ್ಲೇ ಅಂಗನವಾಡಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.