ಶಿರಸಿ: ಪುಷ್ಪದಲ್ಲಿ ಜೀವ ತಳೆದಿರುವ ಕಲಾಕೃತಿಗಳು, ಪ್ರಾಣಿಗಳು, ಸೌಧಗಳ ಸೊಬಗಿನೊಂದಿಗೆ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಮತ್ತು ಕಿಸಾನ್ ಮೇಳ ಶನಿವಾರ ಇಲ್ಲಿನ ತೋಟಗಾರಿಕಾ ಇಲಾಖೆ ಆವರಣದಲ್ಲಿ ಅನಾವರಣಗೊಂಡಿದೆ.
ಸೇವಂತಿಗೆ, ಗುಲಾಬಿ, ಜರ್ಬೆರಾ, ಇನ್ನೂ ಹಲವಾರು ಜಾತಿಯ ಹೂಗಳಿಂದ ಕಮಲ್ ಮಹಲ್, ಅಡಿಕೆ–ಅನಾನಸ್ ಮಂಟಪ, ಚಂದ್ರಯಾನದ ರಾಕೆಟ್, ಪುಷ್ಪ ಬಾನಾಡಿಗಳು, ಉದ್ಯಾನದ ಮಾದರಿ, ಹೂವಿನ ಜೋಡಣೆ, ತರಕಾರಿ ಕೆತ್ತನೆ, ವರ್ಟಿಕಲ್ ಗಾರ್ಡನ್ಗಳು ಗಮನ ಸೆಳೆಯುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ ಅವರು ಮೇಳವನ್ನು ಉದ್ಘಾಟಿಸಿದರು. ತೋಟಗಾರಿಕೆ ಮತ್ತು ಕೃಷಿಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕಾಗಿದೆ. ಆಹಾರ ಬೆಳೆಗಳಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಆಹಾರವೇ ರೋಗಗಳಿಗೆ ಮೂಲವಾಗುತ್ತಿದೆ. ರೈತರು ಸಾಧ್ಯವಾದಷ್ಟು ರಾಸಾಯನಿಕಮುಕ್ತ ಬೆಳೆಗೆ ಒತ್ತು ನೀಡಬೇಕು. ಸಾವಯವ ಕೃಷಿಗೆ ಪೂರಕವಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಯಾಂತ್ರೀಕರಣಕ್ಕೆ ಹೆಚ್ಚಿನ ಬೇಡಿಕೆಯಿರುವ ಕಾರಣ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಬರುವಂತಾಗಬೇಕು. ಬೆಳೆ ಸಂರಕ್ಷಣೆ, ಕೊಯ್ಲೋತ್ತರ ತಂತ್ರಜ್ಞಾನಕ್ಕೂ ಆದ್ಯತೆ ನೀಡಬೇಕು. ಹನಿ ನೀರಾವರಿಗೆ ಅನುದಾನ ಹೆಚ್ಚಿಸಬೇಕು. ಗುಚ್ಛ ಗ್ರಾಮ ಯೋಜನೆ ಹೆಚ್ಚು ಗ್ರಾಮಗಳಿಗೆ ತಲುಪಬೇಕು’ ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಸದಸ್ಯರಾದ ಜಿ.ಎನ್.ಹೆಗಡೆ, ಉಷಾ ಹೆಗಡೆ, ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಪ್ರಭಾವತಿ ಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾಧಿಕಾರಿ ಡಾ.ಹರೀಶಕುಮಾರ್, ಸಿಇಒ ಮೊಹಮ್ಮದ್ ರೋಶನ್, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಇದ್ದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಬಿ.ಪಿ.ಸತೀಶ ಸ್ವಾಗತಿಸಿದರು. ವಿ.ಎಂ.ಹೆಗಡೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.