ಶಿರಸಿ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಈ ವಿಷಯದ ಕುರಿತು ಚರ್ಚಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಮಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳವಾರ ಡಿವೈಎಸ್ಪಿ ರವಿ ನಾಯ್ಕ ಅವರನ್ನು ಭೇಟಿ ಮಾಡಿದ ಹೋರಾಟಗಾರರ ನಿಯೋಗ ವರಿಷ್ಠಾಧಿಕಾರಿ ಅವರಿಗೆ ಸಮಯ ನಿಗದಿಪಡಿಸಲು ಕೋರಿದ ಮನವಿ ಪತ್ರವನ್ನು ನೀಡಿತು.
ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕ, ‘ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಪೋಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಅರಣ್ಯವಾಸಿಗಳಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಈ ಕುರಿತು ವರಿಷ್ಠಾಧಿಕಾರಿ ಅವರ ಗಮನಕ್ಕೆ ತಂದು ಕಿರುಕುಳದ ಬಗ್ಗೆ ಚರ್ಚಿಸಬೇಕಿದೆ’ ಎಂದರು.
‘ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿ ಮೇಲೆ ದಾಖಲಿಸಿದ ಕ್ರಿಮಿನಲ್ ಪ್ರಕರಣಕ್ಕೆ ಮಾನ್ಯತೆ ಸಿಗುತ್ತಿಲ್ಲ. ಕೇವಲ ಅರಣ್ಯವಾಸಿಗಳ ಮೇಲಷ್ಟೆ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ದೌರ್ಜನ್ಯದ ಪ್ರವೃತ್ತಿಯ ಕುರಿತು ಚರ್ಚಿಸಲು ಕಳೆದೆರಡು ವರ್ಷದಿಂದ ಪೊಲೀಸ್ ಇಲಾಖೆಗೆ ಹಲವಾರು ಬಾರಿ ಲಿಖಿತ ಮನವಿ ನೀಡಿದ್ದೇವೆ. ಈವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ’ ಎಂದು ದೂರಿದ್ದಾರೆ.
ನಿಯೋಗದಲ್ಲಿ ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ಉದಯ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ಶಿವಾನಂದ ಪೂಜಾರಿ, ನಾರಾಯಣ ಗೌಡ ಕಕ್ಕಳ್ಳಿ, ಇಬ್ರಾಹಿಂ ಇಮಾಮ್ ಸಾಬ್ ಗೌಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.