
ಶಿರಸಿ: ‘ಅಡಿಕೆ ಭಾಗಾಯ್ತಗಳಿಗೆ ಬಿಟ್ಟಿದ್ದ ಬೆಟ್ಟಭೂಮಿ ‘ಬ’ ಕರಾಬ್ ಆಗಿರುವ ಕಾರಣ ತೋಟಿಗರಿಗೆ ತೀವ್ರ ತೊಂದರೆ ಆಗಿದೆ. ಈ ಸಮಸ್ಯೆ ಪರಿಹಾರಕ್ಕೆ ಶಾಸಕನಾಗಿ ನಾನು ಕೂಡ ಪ್ರಯತ್ನಿಸುತ್ತಿದ್ದು, ಬೆಟ್ಟ ಬಳಕೆದಾರರು ಕೂಡ ತೀವ್ರ ಹೋರಾಟ ಕೈಗೊಳ್ಳಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ತಾಲ್ಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ (ಟಿಎಂಎಸ್) ವತಿಯಿಂದ ಸಹಕಾರ ಸಪ್ತಾಹದ ಅಂಗವಾಗಿ ಸೋಮವಾರ ಸಂಘದ ಸದಸ್ಯರು, ಖರೀದಿದಾರರು ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಈ ಹಿಂದೆ ಜಿಲ್ಲೆಯ ಅಡಿಕೆ ತೋಟಗಾರರ ತೋಟ ಭಾಗಾಯ್ತಕ್ಕೆ ಬಿಟ್ಟ ಬೆಟ್ಟ ಭೂಮಿ 'ಬ' ಕರಾಬ್ ಎಂದು ನಮೂದಾಗಿದೆ. ಇದರಿಂದ ರೈತರಿಗೆ ತೀವ್ರ ತೊಂದರೆ ಆಗಿದ್ದು, ಸರ್ಕಾರ ಮಟ್ಟದಲ್ಲಿ 'ಅ' ಕರಾಬ್ ಮಾಡುವಂತೆ ಸದನದಲ್ಲಿ ಧ್ವನಿ ಎತ್ತಿದ್ದೆ. ಅದಾದನಂತರ ಪರಿಶೀಲನೆ ನಡೆಸಿದಾಗ, ಅರಣ್ಯ ಜಾಗ ಮತ್ತು ಕರಾಬ್ ಜಾಗ ಹೊಂದಾಣಿಕೆ ವೇಳೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದಲೇ ಇಂಥ ತಪ್ಪಾಗಿರುವುದು ಕಂಡು ಬಂದಿದೆ. ಸರ್ಕಾರದಿಂದ ಯಾವುದೇ ಕಾನೂನು ಈ ಕುರಿತು ಆಗಿಲ್ಲ. ಹಾಗಾಗಿ ಬೆಟ್ಟ ಬಳಕೆದಾರರು ಹೋರಾಟ ನಡೆಸಬೇಕು’ ಎಂದರು.
ಸಹಕಾರ ಸಂಘ ಹುಟ್ಟು ಹಾಕುವುದು ಸುಲಭವಾದರೂ ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಸವಾಲಿನ ಹಾಗೂ ಸಾಧನೆಯ ಕಾರ್ಯವಾಗಿದೆ. ಸಹಕಾರ ಸಂಘಗಳಲ್ಲಿ ರೈತರು ಆರ್ಥಿಕ ಶಕ್ತಿ ಪಡೆದಂತೆ ರಾಷ್ಟ್ರೀಕೃತ ಆರ್ಥಿಕ ಸಂಸ್ಥೆಗಲ್ಲಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸಹಕಾರ ವ್ಯವಸ್ಥೆಯ ಜವಾಬ್ದಾರಿ ಹೆಚ್ಚಿದೆ. ಸಹಕಾರ ಸಂಘಗಳಲ್ಲಿ ರಾಜಕೀಯ ನುಸುಳಬಾರದು. ರಾಜಕೀಯ ಪ್ರವೇಶವಾದರೆ ಅಂಥ ಸಂಘಸಂಸ್ಥೆಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ' ಎಂದರು. ‘ರೈತರು ಸಹಕಾರ ವ್ಯವಸ್ಥೆಯಡಿಯೇ ವ್ಯವಹಾರ ಮಾಡಿದರೆ ಸಹಕಾರ ಸಂಘಗಳ ಉಳಿವು, ಬೆಳೆವು ಸಾಧ್ಯ’ ಎಂದೂ ಹೇಳಿದರು.
ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ ಮಾತನಾಡಿ, 'ಯುವ ಪೀಳಿಗೆಗೆ ಸಹಕಾರ ವ್ಯವಸ್ಥೆ, ಆಂದೋಲನಗಳ ಕುರಿತು ಪ್ರಾಥಮಿಕ ಜ್ಞಾನ ನೀಡುವ ಕಾರ್ಯ ಆಗಬೇಕು. ಸಾರ್ವತ್ರಿಕವಾಗಿ ಸಹಕಾರ ತತ್ವ ಪ್ರಚಾರ ಆಗಬೇಕಿದೆ' ಎಂದರು.
'ರಾಜ್ಯ ಸರ್ಕಾರದಲ್ಲಿ ಎಂಎಲ್ ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕಾರ ಕ್ಷೇತ್ರದ ತಜ್ಞರೊಬ್ಬರ ಆಯ್ಕೆಗೆ ಆದ್ಯತೆ ನೀಡಬೇಕು' ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ, ಎಪಿಎಂಸಿ ಕಾರ್ಯದರ್ಶಿ ಸಿ.ಎಚ್.ಮೋಹನ, ಲೆಕ್ಕಪರಿಶೋಧಕ ಪ್ರಕಾಶ ಹೆಗಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೇಮನೆ ಇದ್ದರು. ಸಂಘದ ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಸ್ವಾಗತಿಸಿದರು. ರಶ್ಮಿ ಹೆಗಡೆ ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.
ಇಂದು ಅಡಿಕೆ ಬೆಳೆ ವಿವಿಧ ರೋಗ ಬಾಧೆಗೆ ನಾಶವಾಗುತ್ತಿದೆ. ಕೊಳೆ ರೋಗಕ್ಕೆ ಅಡಿಕೆ ಇಳುವರಿ ಕುಸಿತವಾಗಿದೆ. ಇಂಥ ಕಷ್ಟದ ಸನ್ನಿವೇಶದಲ್ಲಿ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಇರಬೇಕಿದೆ.ಭೀಮಣ್ಣ ನಾಯ್ಕ ಶಾಸಕ
ಸಾಧಕರಿಗೆ ಗೌರವ: ಕಾರ್ಯಕ್ರಮದ ಅಂಗವಾಗಿ ಮುಳುಗು ತಜ್ಞ ಗೋಪಾಲ ಗೌಡ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಸಾದ ಹೆಗಡೆ ಹುಳಗೋಳ ಭಾರತೀಯ ಸೇನೆಯ ವೈದ್ಯಕೀಯ ಸೇವೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಡಾ.ರಶ್ಮಿ ಹೆಗಡೆ ಹಾಗೂ ಯಕ್ಷಗಾನ ಬಾಲಕಲಾವಿದೆ ತುಳಸಿ ಹೆಗಡೆ ಹಾಗೂ ಸಂಘದ ಹಿರಿಯ ಸದಸ್ಯರು ಮತ್ತು ಖರೀದಿದಾರರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.