ಶಿರಸಿ: ಇಲ್ಲಿನ ವಿದ್ಯಾನಗರದ ರುದ್ರಭೂಮಿಗೆ ಮಂಜೂರು ಆಗಿರುವ ಸಾಂಸ್ಕೃತಿಕ ಭವನ ಕಟ್ಟಡಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ರಂಗ ಮಂದಿರ ನಿರ್ಮಾಣ ಆಗಲಿದೆ. ರುದ್ರಭೂಮಿಯ ಅಭಿವೃದ್ಧಿ ಹಲವು ಯೋಜನೆಗಳನ್ನು ಒಳಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲಾಗುವುದು’ ಎಂದರು.
ರುದ್ರಭೂಮಿ ಟ್ರಸ್ಟ್ ಉಪಾಧ್ಯಕ್ಷ ವಿ.ಪಿ.ಹೆಗಡೆ ವೈಶಾಲಿ ಮಾತನಾಡಿ, ‘ಒಟ್ಟು ₹ 2.5 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ ಇದಾಗಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ನಾಗರಿಕರಿಗೆ ಉತ್ತಮ ಸೌಲಭ್ಯ ಸಿಗುವಂತಾಗಬೇಕು’ ಎಂದರು. ಉದ್ದೇಶಿತ ಭವನವು ₹ 60 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯ್ತಿ ಉಸ್ತುವಾರಿಯಲ್ಲಿ ನಿರ್ಮಾಣವಾಗಲಿದೆ. ಗುತ್ತಿಗೆದಾರ ಎನ್.ವಿ.ಹೆಗಡೆ ಕಾಮಗಾರಿ ಗುತ್ತಿಗೆ ನಿರ್ವಹಿಸುವರು.
ಸಮಿತಿಯ ಅಧ್ಯಕ್ಷ ಕಾಶೀನಾಥ ಮೂಡಿ ಇದ್ದರು. ತಾಲ್ಲೂಕು ಪಂಚಾಯ್ತಿ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ನಗರಸಭೆ ಸದಸ್ಯರಾದ ವೀಣಾ ಶೆಟ್ಟಿ, ಶರ್ಮಿಳಾ ಮಾದನಗೇರಿ, ಮುಕ್ತಾ ಶೆಟ್ಟಿ, ಆನಂದ ಸಾಲೇರ್, ಎಂಜಿನಿಯರ್ ರಾಮಚಂದ್ರ ಗಾಂವಕರ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.