ADVERTISEMENT

ಬೆಲೆ ಬಾಳುವ ನಾಟಾ ಅಕ್ರಮ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 13:29 IST
Last Updated 15 ಆಗಸ್ಟ್ 2020, 13:29 IST
ಯಲ್ಲಾಪುರ ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಮೇತವಾಗಿ ಸೀಸಂ ಹಾಗೂ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.
ಯಲ್ಲಾಪುರ ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಮೇತವಾಗಿ ಸೀಸಂ ಹಾಗೂ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.   

ಯಲ್ಲಾಪುರ: ತಾಲ್ಲೂಕಿನ ಬಿಸಗೋಡು ಶಾಖೆಯ ವಡೇಹುಕ್ಕಳಿ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಆರೋಪದಡಿ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಒಬ್ಬ ಆರೋಪಿಗೆ ಹುಡುಕಾಟ ನಡೆಸಲಾಗುತ್ತಿದೆ.

ಕಾಳಮ್ಮನಗರದ ನಿವಾಸಿಜೆ.ಡಿ.ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರವಿಚಂದ್ರ ಕೃಷ್ಣ ನಾಯ್ಕ, ತೆಲಂಗಾರಿನ ಮಂಜುನಾಥ ಮಾಸ್ತಿ ಪಟಗಾರ, ಉಧ್ಯಮನಗರದ ಮಂಜುನಾಥ ದೇವಿದಾಸ ಗೌಡ ಹಾಗೂ ಬನವಾಸಿ ಗ್ರಾಮ ಪಂಚಾಯ್ತಿಯ ಮುಂಡಿಗೆಹಳ್ಳಿಯ ಹುಲಿಯಾ ಬೊಮ್ಮುಗೌಡ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ, ಪಟ್ಟಣ ವ್ಯಾಪ್ತಿಯ ತಳ್ಳಿಕೇರಿಯ ತಿಮ್ಮಣ್ಣ ಗಣಪತಿ ಗೌಡ ಪರಾರಿಯಾಗಿದ್ದಾರೆ.

ಆರೋಪಿಗಳಿಂದ 1.380 ಘನ ಮೀಟರ್ ಅಳತೆಯ 21 ಸಾಗವಾನಿ ಮರದ ತುಂಡುಗಳು ಹಾಗೂ 0.627 ಘನ ಮೀಟರ್ ಅಳತೆಯ 11 ಸೀಸಂ ಮರದ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ ಮೂರು ಬೈಕ್‌ಗಳು, ಒಂದು ಪಿಕ್‌ಅಪ್ ವಾಹನವನ್ನೂ ಜಪ್ತಿ ಮಾಡಲಾಗಿದೆ. ನಾಟಾದ ಅಂದಾಜು ಮೌಲ್ಯ ₹ 3 ಲಕ್ಷ ಹಾಗೂ ವಾಹನಗಳ ಮೌಲ್ಯ ಸುಮಾರು ₹ 5 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹಬ್ಬಗಳಂತಹ ಸಂದರ್ಭದಲ್ಲಿ ಅರಣ್ಯಗಳ್ಳರು ಕಾರ್ಯಾಚರಣೆ ನಡೆಸುವ ಮಾಹಿತಿಯ ಮೇರೆಗೆ ಕಟ್ಟುನಿಟ್ಟಿನ ಕಾವಲು ಕಾಯುವಂತೆ ಸಿಬ್ಬಂದಿಗೆ ಸೂಚಿಸಲಾಗಿತ್ತು. ಅದರಂತೆ ಸಿಬ್ಬಂದಿಯ ಶ್ರಮದ ಫಲವಾಗಿ ಅರಣ್ಯಗಳ್ಳರು ಸಿಕ್ಕಿಬಿದ್ದಿದ್ದಾರೆ ಎಂದು ಯಲ್ಲಾಪುರದ ವಲಯದ ಉಪ‍ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ ತಿಳಿಸಿದರು.

ಡಿ.ಸಿ.ಎಫ್ ಗೋಪಾಲಕೃಷ್ಣ ಹೆಗಡೆ ಹಾಗೂ ಎ.ಸಿ.ಎಫ್ ಅಶೋಕ ಭಟ್ಟ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಒ ಬಾಲಸುಬ್ರಮಣ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿ ಚಂದ್ರಕಾಂತ ಶಾಂತಾರಾಮ ನಾಯ್ಕ, ಅಶೋಕ ಶಿರಗಾಂವಿ, ಬಸಲಿಂಗಪ್ಪ, ಅಲ್ತಾಫ್ ಚೌಕಡಾಕ, ಶ್ರೀನಿವಾಸ ನಾಯ್ಕ, ಅಶೋಕ ಹಳ್ಳಿ, ಸಂಜಯಕುಮಾರ ಬೋರಗಲ್ಲಿ, ನಾಗರಾಜ ಕಲ್ಗುಟಕರ, ಶರಣಬಸು ದೇವರ ಅರಣ್ಯ ರಕ್ಷಕರಾದ ಶಿವಪ್ರಸಾದ ದೇವಮಾನೆ, ಅಲ್ಮಾಸ್, ನಾಗಪ್ಪ, ಸುನೀಲ್, ಚನ್ನಬಸಪ್ಪ, ಸಂತೋಷ ಕರಚಕಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.