ಕಾರವಾರ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣಪನ ವಿಗ್ರಹಗಳನ್ನು ಶನಿವಾರ ಅದ್ಧೂರಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಯಿತು. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ಸಾವಿರಾರು ಜನ ಸೇರಿ ಮೆರವಣಿಗೆಯಲ್ಲಿ ಸಾಗಿದರು.
ಏಳು ಕಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪೂಜಿಸಿದ್ದ ಗಣಪತಿ ವಿಗ್ರಹಗಳನ್ನು ಶನಿವಾರ ಸಂಜೆ ವಿಸರ್ಜನೆ ಮಾಡಲಾಯಿತು. ಪಟಾಕಿ ಸಿಡಿಸಿ, ಜೈಕಾರ ಕೂಗುತ್ತ, ಧ್ವನಿವರ್ಧಕದ ಹಾಡಿಗೆ ಕುಣಿಯುತ್ತ ಸಂಭ್ರಮಿಸಿದರು. ವಿವಿಧ ವೇಷ ಭೂಷಣಧಾರಿಗಳ ನೃತ್ಯ, ಮೆರವಣಿಗೆಯಲ್ಲಿ ಯುವಕರು ರಚಿಸಿದ್ದ ಮಾನವ ಪಿರಮಿಡ್ ಆಕರ್ಷಿಸಿದವು.
ಹತ್ತು ದಿನಗಳ ಪೂಜೆಯ ಬಳಿಕ ವಿನಾಯಕನ ವಿಗ್ರಹಗಳನ್ನು ರವೀಂದ್ರನಾಥ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ, ಕಾಳಿ ರಿವರ್ ಗಾರ್ಡನ್ ಬಳಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಕೆ.ಇ.ಬಿ ರಸ್ತೆ, ಸವಿತಾ ಹೋಟೆಲ್ ವೃತ್ತ, ಗ್ರೀನ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.