ADVERTISEMENT

ಗಾಂಧಿ ಕಲ್ಪನೆಯ ಸ್ವರಾಜ್ಯ ಸಾಕಾರಗೊಳ್ಳಲಿ: ಸುಧೀರಕುಮಾರ ಮುರೊಳ್ಳಿ

ಸತ್ಯಾಗ್ರಹಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 15:36 IST
Last Updated 2 ಅಕ್ಟೋಬರ್ 2021, 15:36 IST
ಶಿರಸಿಯಲ್ಲಿ ಶನಿವಾರ ದೇಶಕ್ಕಾಗಿ ನಾವು ಸಂಘಟನೆ ಹಮ್ಮಿಕೊಂಡಿದ್ದ ಸತ್ಯಾಗ್ರಹಿ ಕಾರ್ಯಕ್ರಮವನ್ನು ಚಿಂತಕ ವಿ.ಪಿ.ಹೆಗಡೆ ವೈಶಾಲಿ ಉದ್ಘಾಟಿಸಿದರು
ಶಿರಸಿಯಲ್ಲಿ ಶನಿವಾರ ದೇಶಕ್ಕಾಗಿ ನಾವು ಸಂಘಟನೆ ಹಮ್ಮಿಕೊಂಡಿದ್ದ ಸತ್ಯಾಗ್ರಹಿ ಕಾರ್ಯಕ್ರಮವನ್ನು ಚಿಂತಕ ವಿ.ಪಿ.ಹೆಗಡೆ ವೈಶಾಲಿ ಉದ್ಘಾಟಿಸಿದರು   

ಶಿರಸಿ: ಪ್ರತಿಯೊಬ್ಬರೂ ತಮ್ಮನ್ನು ಆಳಿಕೊಳ್ಳುವ ಮತ್ತು ಸಮಾಜದಲ್ಲಿ ಸಮಾನತೆ ಕಲ್ಪಿಸುವ ಸ್ವರಾಜ್ಯ ಸ್ಥಾಪನೆಯಾಗಬೇಕು. ಅದು ಮಹಾತ್ಮ ಗಾಂಧೀಜಿ ಕಂಡಿದ್ದ ನಿಜವಾದ ಸ್ವರಾಜ್ಯದ ಕನಸಾಗಿತ್ತು ಎಂದು ನ್ಯಾಯವಾದಿ ಸುಧೀರಕುಮಾರ ಮುರೊಳ್ಳಿ ಹೇಳಿದರು.

ದೇಶಕ್ಕಾಗಿ ನಾವು ಸಂಘಟನೆ ಶನಿವಾರ ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸತ್ಯಾಗ್ರಹಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಶತಮಾನಗಳಿಂದ ಆಳರಸರ ಕೈಯ್ಯಲ್ಲಿದ್ದ, ಜೀತದ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದ ಗಾಂಧೀಜಿ ಜಮೀನುದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತ್ತು. ಅದು ಅವರ ಹತ್ಯೆಗೆ ಮೂಲ ಕಾರಣವಾಯಿತು’ ಎಂದರು.

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ‘ಸಮಾಜ ಗಾಂಧೀಜಿಯವರ ಆಶಯಕ್ಕೆ ವಿರುದ್ಧವಾಗಿ ಸಾಗುತ್ತಿದೆ. ಅವರ ಮೂಲಭೂತ ಧ್ಯೇಯ ಗ್ರಾಮಗಳ ಅಭಿವೃದ್ಧಿಯ ಪರವಿತ್ತು. ದೇಶ ಗಟ್ಟಿಯಾಗಬೇಕಾದರೆ ಹಳ್ಳಿಗಳು ಬಲಿಷ್ಠಗೊಳ್ಳಬೇಕು ಎಂಬುದನ್ನು ಪ್ರತಿಪಾದಿಸಿದ್ದರು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ್ದ ಚಿಂತಕ ವಿ.ಪಿ.ಹೆಗಡೆ ವೈಶಾಲಿ, ‘ಗಾಂಧೀಜಿಯವರ ಮೌಲ್ಯಗಳು ಯುವಜನತೆಗೆ ತಿಳಿಯಬೇಕಿದೆ. ಅವರ ತತ್ವಾದರ್ಶ ಬದುಕಿನ ರೂಢಿಯಾಗಲಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ‘ದೇಶದಲ್ಲಿ ನಿರ್ಭಯ ವಾತಾವರಣ ಮೂಡಿದೆ ಎಂದರೆ ಅದು ಗಾಂಧೀಜಿ ಕೊಡುಗೆ. ಯುವ ಸಮೂಹಕ್ಕೆ ಗಾಂಧೀಜಿ ಜೀವನ ಪಾಠವಾಗಬೇಕು. ಶ್ರಮಜೀವನ, ಸಹಬಾಳ್ವೆಗೆ ಗಾಂಧೀಜಿ ಮಾರ್ಗದರ್ಶಿ’ ಎಂದರು.

ಪತ್ರಕರ್ತ ವೆಂಕಟೇಶ ಸಂಪ, ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ದೊಡ್ಮನೆ, ಸಂದೀಪ ಬೂದಿಹಾಳ ಉಪನ್ಯಾಸ ನೀಡಿದರು.

ಎಸ್.ಕೆ.ಭಾಗವತ, ಅಬ್ಬಾಸ ತೊನ್ಸೆ, ಜ್ಯೋತಿ ಪಾಟೀಲ, ಪ್ರವೀಣ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.