ಶಿರಸಿ: ಮಳೆಯ ಅಬ್ಬರಕ್ಕೆ ತಾಲ್ಲೂಕಿನಲ್ಲಿ ಶುಂಠಿ ಬೆಳೆಗಾರರು ಕಂಗಾಲಾಗಿದ್ದಾರೆ. ಬಲಿತ ಶುಂಠಿಗೆ ಮಳೆ ನೀರಿನಿಂದಾಗಿ ಕೊಳೆರೋಗ ಬರುತ್ತಿದೆ. ಬನವಾಸಿ, ಅಂಡಗಿ, ಗುಡ್ನಾಪುರ, ನರೂರು, ಭಾಶಿ, ಮಧುರವಳ್ಳಿ, ಕಲಕರಡಿ, ಬದನಗೋಡ ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ.
ತಾಲ್ಲೂಕಿನ ವಿವಿಧೆಡ ಈ ಬಾರಿ ಎರಡು ಸಾವಿರ ಹೆಕ್ಟೇರ್ ಶುಂಠಿ ಬೆಳೆಯಲಾಗಿದೆ.ಬದನಗೋಡ ಭಾಗದಲ್ಲಿ ಮಳೆಯಿಂದ ಸುಮಾರು400 ಹೆಕ್ಟೇರ್ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದನಗನಹಳ್ಳಿ, ಬದನಗೋಡ, ದಾಸನಕೊಪ್ಪ, ಬೆಳ್ಳನಕೇರಿ, ಸಂತೋಳ್ಳಿ, ವದ್ದಲ, ಕಾಳಂಗಿ, ಕುಪ್ಪಗಡ್ಡೆ, ರಂಗಾಪುರದಲ್ಲಿಬೆಳೆಗೆಕೊಳೆ ರೋಗ ಬಂದಿದೆ. ಎಕರೆಯೊಂದಕ್ಕೆ ಕನಿಷ್ಠ ₹ 10 ಲಕ್ಷ ಹಾನಿಯಾಗಿದೆ ಎಂದು ಹೇಳುತ್ತಾರೆ ಕೃಷಿಕ ಉಮಾಕಾಂತ.
ಜೂನ್ ಹಾಗೂ ಜುಲೈ ತಿಂಗಳಲ್ಲಿ ಬಂದಭಾರಿ ಮಳೆಯಿಂದಶುಂಠಿ ಬೆಳೆದ ಜಾಗದಲ್ಲಿ ನೀರು ನುಗ್ಗಿತ್ತು. ಬಿತ್ತನೆ ಮಾಡಿದ್ದ ಬೀಜಗಳೆಲ್ಲ ನೀರಿನಲ್ಲಿ ತೇಲಿ ಹೋಗಿದ್ದವು. ಅಳಿದುಳಿದಬೆಳೆಯೂಈಗಬಿದ್ದ ಮಳೆಯಿಂದ ಕೊಳೆರೋಗಕ್ಕೆ ತುತ್ತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಒಂದು ಎಕರೆ ಶುಂಠಿ ಬೆಳೆಯಲು ಪ್ರಾರಂಭದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕು. ಉತ್ತಮ ಬೆಳೆ ಬಂದರೆ ಎಕರೆಯೊಂದಕ್ಕೆ ₹10 ಲಕ್ಷಕ್ಕೂ ಹೆಚ್ಚಿನ ಹಣವನ್ನು ರೈತರು ಗಳಿಸುತ್ತಾರೆ. ಆದರೆ, ಈ ಬಾರಿಮಾತ್ರ ಹೂಡಿದ ಬಂಡವಾಳವವೂ ಸಿಗದ ಸ್ಥಿತಿ ಎದುರಾಗಿದೆ.
‘ಸಮರ್ಪಕ ವರದಿ ಕಳುಹಿಸಿ’:‘ಈಗಾಗಲೇ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರು ಸಂಕಷ್ಟದಿಂದ ತೊಳಲಾಡುತ್ತಿದ್ದಾರೆ. ಬೆಳೆದ ಬೆಳೆಗಳೆಲ್ಲ ಹಾಳಾಗುತ್ತಿದ್ದು, ಸಾಲ ಮಾಡಿ ಆರೈಕೆ ಮಾಡಿದ ಕೃಷಿಯೂ ಮಳೆಯ ಆರ್ಭಟಕ್ಕೆ ಹಾಳಾಗಿದೆ. ಸಾಲ ಹೇಗೆ ತೀರಿಸಬೇಕು ಎಂಬುದೇ ಚಿಂತೆಯಾಗಿದೆ. ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ಸಮರ್ಪಕ ವರದಿ ಕಳುಹಿಸಿ ರೈತರ ಕೈ ಹಿಡಿಯಬೇಕು’ ಎನ್ನುವುದು ಬೆಳ್ಳನಕೇರಿಯ ರೈತಉಮಾಕಾಂತ ಎಸ್.ಕೆ ಅವರ ಒತ್ತಾಯವಾಗಿದೆ.
‘ಕೃಷಿಕರು ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಲೇ ಇದ್ದಾರೆ. ಶುಂಠಿ ಬೆಳೆಗೆ ಕೊಳೆ ರೋಗ ಬಂದು ಆದ ಹಾನಿಗೆ ತಕ್ಷಣವೇ ಪರಿಹಾರ ನೀಡಬೇಕು. ಆ ನಿಟ್ಟಿನಲ್ಲಿ ಈ ಭಾಗದ ತೋಟಗಾರಿಕಾ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂಬುದು ಬದನಗೋಡ ಗ್ರಾಮ ಪಂಚಾಯ್ತಿ ಸದಸ್ಯಗಣೇಶ ಕ್ಷತ್ರಿಯ ಅವರ ಆಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.