
ಕಾರವಾರ: ಇಲ್ಲಿನ ಕಾಳಿ ನದಿ ಅಳಿವೆ ಪ್ರದೇಶದಿಂದ ಗುರುವಾರ ರಕ್ಷಿಸಲಾದ ಹಸಿರು ಕಡಲಾಮೆಗೆ (ಗ್ರೀನ್ ಸೀ ಟರ್ಟಲ್) ಶುಕ್ರವಾರ ದಿನವಿಡೀ ಚಿಕಿತ್ಸೆ ನೀಡಿ, ಆರೈಕೆ ಮಾಡಲಾಯಿತು.
ಇಲ್ಲಿನ ಅರಣ್ಯ ಇಲಾಖೆಯ ಕೋಸ್ಟಲ್ ಮೆರೈನ್ ವಿಭಾಗದ ಕಚೇರಿ ಬಳಿ ನೀರಿನ ತೊಟ್ಟಿಯಲ್ಲಿ ಕಡಲಾಮೆ ಇರಿಸಲಾಗಿದೆ. ಗೋವಾದ ರೀಪ್ ವಾಚ್ ಸಾಗರಜೀವಿ ಸಂರಕ್ಷಣಾ ಸಂಸ್ಥೆಯ ತಜ್ಞ ವೈದ್ಯ ಡಾ.ಮನೋಹರ ನಗ್ರೆ ನೇತೃತ್ವದ ತಂಡದ ಸದಸ್ಯರು ಗುರುವಾರ ತಡರಾತ್ರಿಯಿಂದ ಚಿಕಿತ್ಸೆ ನೀಡುತ್ತಿದ್ದಾರೆ.
‘ಕಡಲಾಮೆ ಅಸ್ವಸ್ಥಗೊಂಡಿದೆ. ಅದಕ್ಕೆ ಗಾಯಗಳಾಗಿಲ್ಲ. ವಯಸ್ಸು ಸುಮಾರು 70 ವರ್ಷ ಇರಬಹುದು. 3–4 ದಿನಗಳಿಂದ ಆಹಾರ ಸೇವಿಸಿಲ್ಲ. ಹೀಗಾಗಿ, ಲವಣಯುಕ್ತ ದ್ರಾವಣ ಒದಗಿಸಲಾಗಿದೆ’ ಎಂದು ಮನೋಹರ ತಿಳಿಸಿದರು. ‘ಕಡಲಾಮೆ ಆರೋಗ್ಯ ಸ್ಥಿತಿ ಮೇಲೆ ನಿಗಾ ಇರಿಸಿದ್ದೇವೆ. ಚೇತರಿಸಿಕೊಂಡ ಬಳಿಕ ಸಮುದ್ರಕ್ಕೆ ಬಿಡಲಾಗುವುದು’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.